ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಕೊಂಡಾಡಿದ ಮುಖ್ಯಮಂತ್ರಿ ಬೊಮ್ಮಾಯಿ

ಬಾಲಗಂಗಾಧರನಾಥ ಸ್ವಾಮಿಗಳು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದಿದೆ.  ನಿರ್ಮಲಾನಂದನಾಥ ಸ್ವಾಮೀಜಿಗಳ  ಕಾಲದಲ್ಲಿ ಸಂಸ್ಥೆ ಬೆಳೆಯುತ್ತಿದೆ. ಪ್ರಕಾಶನಾಥ ಸ್ವಾಮೀಜಿ ಕೂಡ ಬೆಂಗಳೂರಿನ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ.

Written by - Prashobh Devanahalli | Edited by - Yashaswini V | Last Updated : Feb 14, 2023, 02:43 PM IST
  • ಒಂದು ಲಕ್ಷ ಐವತ್ತು ಸಾವಿರ ಮಕ್ಕಳು ಬಿಜಿಎಸ್ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ.
  • ವೈದ್ಯಕೀಯ ಶಿಕ್ಷಣ, ಆಸ್ಪತ್ರೆಯಿಂದ ಪಬ್ಲಿಕ್ ಶಾಲೆಯವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ‌.
  • ತಮ್ಮದೇ ಆದ ಬ್ರಾಂಡ್ ಸೃಷ್ಟಿಸಿರುವುದು ಕರ್ನಾಟಕದ ಹೆಮ್ಮೆ.
ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಕೊಂಡಾಡಿದ ಮುಖ್ಯಮಂತ್ರಿ ಬೊಮ್ಮಾಯಿ title=
ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಪರೂಪದ ಸ್ವಾಮೀಜಿ- ಸಿಎಂ ಬೊಮ್ಮಾಯಿ

ಬೆಂಗಳೂರು: ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಪರೂಪದ  ಸ್ವಾಮೀಜಿಗಳು.   ವಿಜ್ಞಾನ ಮತ್ತು ತತ್ವಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಅವೆರಡನ್ನೂ ಆಳವಾಗಿ ಅಧ್ಯಯನ ಮಾಡಿ  ಸಮಾಜಕ್ಕೆ ನೀಡುವ ದೊಡ್ಡ ಸಾಧನೆ ಅವರದ್ದು.  ವಿಚಾರಗಳನ್ನು ವೈಜ್ಞಾನಿಕವಾಗಿ ನೋಡಿ ತತ್ವಜ್ಞಾನ ವನ್ನು ಅಳವಡಿಸಿ  ಅಂತಿಮ ನಿರ್ಧಾರ ತೆಗೆದುಕೊಳ್ಳುವ ವಿಧಿವಿಧಾನ ಸ್ವಾಮೀಜಿಗಳಲ್ಲಿದ್ದರೆ ಇಡೀ ಸಮಾಜಕ್ಕೆ ದಾರಿದೀಪವಾಗಬಹುದು  ಎನ್ನಲು ಅವರು ಉದಾಹರಣೆಯಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

ಇಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ: ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕದ  ದಶಮಾನೋತ್ಸವ ಸಮಾರಂಭ, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಜ್ಯೋತಿರ್ದಾನ   ಸಮಾರಂಭವನ್ನು   ಉದ್ಘಾಟಿಸಿ ಮಾತನಾಡಿದ ಅವರು, ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕವಾಗಿ ಒಂದು ದಶಕ  ಕಳೆದಿದ್ದು, ಇದು ಆತ್ಮಾವಲೋಕನ ಹಾಗೂ ಸಿಂಹಾವಲೋಕನ ಮಾಡಿಕೊಳ್ಳುವ ಘಟ್ಟ.  ಹತ್ತು ವರ್ಷಗಳಲ್ಲಿ  ನಿರ್ಮಲಾನಂದನಾಥ ಸ್ವಾಮೀಜಿಗಳು ಅಪಾರ ಸಾಧನೆ ಮಾಡಿದ್ದಾರೆ. ಬಾಲಗಂಗಾಧರನಾಥ ಸ್ವಾಮಿಗಳು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದಿದೆ.  ನಿರ್ಮಲಾನಂದನಾಥ ಸ್ವಾಮೀಜಿಗಳ  ಕಾಲದಲ್ಲಿ ಸಂಸ್ಥೆ ಬೆಳೆಯುತ್ತಿದೆ. ಪ್ರಕಾಶನಾಥ ಸ್ವಾಮೀಜಿ ಕೂಡ ಬೆಂಗಳೂರಿನ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಕಷ್ಟಪಟ್ಟು ನಿರ್ಮಾಣವಾಗಿರುವ ಸಂಸ್ಥೆಗಳನ್ನು ಅಂತರರಾಷ್ಟ್ರೀಯ  ಗುಣಮಟ್ಟ ಕಾಯ್ದುಕೊಂಡು ಬೆಳೆಸಿರುವುದು ಸಂಸದ ಸಂಗತಿ ಎಂದರು. 

ಬಿಜಿಎಸ್ ಬ್ರಾಂಡ್:
ಒಂದು ಲಕ್ಷ ಐವತ್ತು ಸಾವಿರ ಮಕ್ಕಳು ಬಿಜಿಎಸ್  ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ, ಆಸ್ಪತ್ರೆಯಿಂದ ಪಬ್ಲಿಕ್ ಶಾಲೆಯವರೆಗೆ ವಿದ್ಯಾಭ್ಯಾಸ  ಮಾಡುತ್ತಿದ್ದಾರೆ‌. ತಮ್ಮದೇ ಆದ ಬ್ರಾಂಡ್ ಸೃಷ್ಟಿಸಿರುವುದು ಕರ್ನಾಟಕದ ಹೆಮ್ಮೆ.  ಕರ್ನಾಟಕದಾದ್ಯಂತ ಸಂಸ್ಥೆಯ ಸೇವೆಗಳು ಲಭ್ಯವಾಗಬೇಕೆನ್ನುವುದು ಸ್ವಾಮೀಜಿಗಳ ಇಚ್ಛೆ.   ಉತ್ತರ ಕರ್ನಾಟಕದಲ್ಲಿ ಈ ಸಂಸ್ಥೆಗಳನ್ನು ತೆರೆದು ಅಭಿವೃದ್ದಿ ಮಾಡುತ್ತಿದ್ದಾರೆ.  ಕಿಡ್ನಿ, ಲಿವರ್ ಕಸಿ ಮಾಡಿಸಿಕೊಳ್ಳಲು ಇತ್ತರ ಕರ್ನಾಟಕದ ಜನ ಬಿಜಿಎಸ್ ಆಸ್ಪತ್ರೆಗೆ ನೇರವಾಗಿ ಬರುವಷ್ಟು ಸೌಲಭ್ಯಗಳು ದೊರೆಯುತ್ತಿವೆ ಎಂದರು. ಬಿಜಿಎಸ್ ಸಂಸ್ಥೆಗಳು ಉತ್ತರ ಮತ್ತು ದಕ್ಷಿಣ ಬೆಸೆಯುವ ಕೇಂದ್ರವಾಗಿದೆ‌ ಎಂದು  ತಿಳಿಸಿದರು.

ಇದನ್ನೂ ಓದಿ- “ತುಳುವರಿಗೆ ಕನ್ನಡ ರಾಜ್ಯ ಭಾಷೆ, ತುಳು ಮಾತೃಭಾಷೆ”: ಒಡಿಯೂರು ಶ್ರೀ

ಅಭೂತಪೂರ್ವ ಸಾಧನೆ: 
ಗ್ರಾಮೀಣ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಪ್ರಮುಖ ಮಠ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರ ಮಾಡುವ ಕೆಲಸವನ್ನು ಕರ್ನಾಟಕದ ಅನೇಕ ಮಠಗಳು ಮಾಡಿಕೊಂಡು ಬಂದಿವೆ.  ಕರ್ನಾಟಕದಲ್ಲಿ ಶಿಕ್ಷಣ ಪ್ರಮಾಣ ಹೆಚ್ಚಳವಾಗಿದ್ದರೆ‌, ಸಾಧನೆಯಾಗಿದ್ದರೆ  ಅದಕ್ಕೆ  ಮಠ ಮಾನ್ಯಗಳು ಯಾವುದೇ ಬೆಂಬಲವಿಲ್ಲದೆ ಮಾಡಿರುವುದು ಕಾರಣ. ನಿರ್ಮಲಾನಂದನಾಥ ಸ್ವಾಮೀಜಿ ಗಳ  ಒಂದು ದಶಕದ ಸಾಧನೆ  ಅಭೂತಪೂರ್ವವಾಗಿದೆ‌.  ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭದಲ್ಲಿ  ಭವಿಷ್ಯದ ಚಿಂತನೆ ಮಾಡಬೇಕು ಎಂದರು.

ಮಾರ್ಗದರ್ಶನ ಅಗತ್ಯ: 
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ನೀಡಿ ಅವನನ್ನು ಸ್ವಾವಲಂಬಿಯನ್ನಾಗಿಸಲು  ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದ ಅಗತ್ಯ.  ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಇದು ದೊರೆಯಲಿ ಎಂಬುದು ನಮ್ಮ ಆಶಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

ಮಕ್ಕಳಿಗೆ ಕಿವಿ ಮಾತು:
ಮಕ್ಕಳ ಪ್ರೌಢಶಾಲಾ  ಜೀವನ ಅತ್ಯಂತ ಮಹತ್ವದದ ಘಟ್ಟ.  ಮಕ್ಕಳನ್ನು ನೋಡಿದಾಗ ನಾನು ನಮ್ಮ ರಾಜ್ಯ ಹಾಗೂ ದೇಶದ ಭವಿಷ್ಯದ ಬಗ್ಗೆ ಆಶಾದಾಯಕವಾಗಿ ಆಲೋಚಿಸುತ್ತೇನೆ. ಭವಿಷ್ಯ ನಿಮ್ಮಲ್ಲೇ ಅಡಗಿದ್ದು, ದೇಶವನ್ನು ಯುವಜನಾಂಗ ಕಟ್ಟಬೇಕು.  ಶೇ 40% ರಷ್ಟು ಯುವ ಸಮೂಹವಿರುವ ಈ ದೇಶಕ್ಕೆ ಅತ್ಯಂತ ದೊಡ್ಡ ಭವಿಷ್ಯವಿದೆ ಎಂದರು. 

ಇದನ್ನೂ ಓದಿ- ಪಾನಿಪೂರಿ ತಿಂದೂ ಹೋದ, 30 ಸಾವಿರ ಕೊಂಡೂ ಹೋದ! ವ್ಯಾಪಾರಿಗೆ ಖಾತೆಗೆ ಕನ್ನ ಹಾಕಿದವ ಏನಾದ ಗೊತ್ತಾ?

ನಿರಂತರ ಪ್ರಯತ್ನ ಮಾಡಬೇಕು. ಪರಿಶ್ರಮದಲ್ಲಿ ನಂಬಿಕೆಯಿಡಿ. ಸೋಲುಗಳಿಗೆ ಎದೆಗುಂದಬೇಡಿ. ಪರಮ ಹಂಸ ಪಕ್ಷಿಯಂತೆ ಎತ್ತರಕ್ಕೆ ಹಾರುವ ಕನಸು ಕಾಣಿರಿ ಎಂದು ಮುಖ್ಯಮಂತ್ರಿಗಳು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ  ಸಚಿವರಾದ ಆರ್.ಅಶೋಕ್ , ಡಾ ಕೆ.ಸುಧಾಕರ್,  ಶಾಸಕ ಸತೀಶ್ ರೆಡ್ಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ, ಸಾಹಿತಿ ದೊಡ್ಡರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News