ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ -ಜೆಡಿಎಸ್ ಶಾಸಕರ ರಾಜೀನಾಮೆ ಪ್ರಹಸನ ಈಗ ಸಮಿಶ್ರ ಸರ್ಕಾರಕ್ಕೆ ಆತಂಕವನ್ನು ಸೃಷ್ಟಿ ಮಾಡಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರುಗಳಾದ ಎಚ್. ವಿಶ್ವನಾಥ್, ರಮೇಶ್ ಜಾರಕಿಹೋಳಿ, ಸೋಮಶೇಖರ್, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ, ಬಿ.ಸಿ. ಪಾಟೀಲ್, ಮಹೇಶ್ ಕುಮತಹಳ್ಳಿ, ನಾರಾಯಣ ಗೌಡ, ಬೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಮತ್ತು ರಾಮಲಿಂಗ ರೆಡ್ಡಿ, ಈಗ ರಾಜೀನಾಮೆ ನೀಡಿರುವ ಶಾಸಕರಾಗಿದ್ದಾರೆ.ಈಗ ಇವರು ರಾಜೀನಾಮೆ ನೀಡಿರುವುದರಿಂದ ಸರ್ಕಾರಕ್ಕೆ ಈಗ ಅಭದ್ರತೆ ಎದುರಾಗಿದೆ.
ಇನ್ನೊಂದೆಡೆಗೆ ಈ ರಾಜೀನಾಮೆ ಪ್ರಹಸನದ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ, ಒಂದು ವೇಳೆ ಸಮ್ಮಿಶ್ರ ಸರ್ಕಾರ ಬಿದ್ದಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಯತ್ನಕ್ಕೆ ಪ್ರಯತ್ನಿಸುತ್ತಿದೆ.ಈಗ ವಿಧಾನಸಭಾ ಸ್ಪೀಕರ್ ಕಚೇರಿ ಶಾಸಕರ ರಾಜಿನಾಮೆಯನ್ನು ಸ್ವೀಕರಿಸಿದ್ದರು ಕೂಡ ಸ್ಪೀಕರ್ ರಮೇಶ್ ಕುಮಾರ್ ಈ ವಿಚಾರವಾಗಿ ಸೋಮವಾರದಂದು ಚರ್ಚಿಸುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಸ್ಪೀಕರ್ ಕಚೇರಿಗೆ ರಾಜೀನಾಮೆ ನೀಡಿದ ನಂತರ 11 ಶಾಸಕರು ಈಗ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಒಂದು ವೇಳೆ ಸರ್ಕಾರಕ್ಕೆ ಬಹುಮತದ ಕೊರತೆ ಬಿದ್ದಲ್ಲಿ ಆಗ ಸಮ್ಮಿಶ್ರ ಸರ್ಕಾರ ಬೀಳಬಹುದು. ಇದಾದ ನಂತರ ರಾಜ್ಯಪಾಲರು ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಬಹುದು.ಈ ಹಿನ್ನಲೆಯಲ್ಲಿ ಈಗ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿರುವುದು ಸಾಕಷ್ಟು ಕೂತೂಹಲ ಕೆರಳಿಸಿದೆ ಎನ್ನಬಹುದು.