ಬಾದಾಮಿ ಜೆಡಿಎಸ್ ಅಭ್ಯರ್ಥಿ ಘೋಷಣೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಟಕ್ಕರ್

ಬಾದಾಮಿಯಲ್ಲಿ ಜೆಡಿಎಸ್​ ಅಭ್ಯರ್ಥಿಯನ್ನಾಗಿ ಹನುಮಂತ ಮಾವಿನ ಮರದ್​ ಹೆಸರನ್ನು ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

Last Updated : May 9, 2022, 08:15 PM IST
  • 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮ ವಿಚಾರವಾಗಿ ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ
  • ನಾವು 10 ಕೆಜಿ ಅಕ್ಕಿ ಕೊಟ್ಟು ನಿಮ್ಮನ್ನು ಬಿಕಾರಿ‌ ಮಾಡುವುದಿಲ್ಲವೆಂದು ಸಿದ್ದರಾಮಯ್ಯಗೆ ಟಕ್ಕರ್
  • ಧರ್ಮದ ಹೆಸರಲ್ಲಿ ನಾಡನ್ನು ಹಾಳು ಮಾಡುವವರ ಬಗ್ಗೆ ಗಮನ ಕೊಡಬೇಡಿ ಎಂದ ಕುಮಾರಸ್ವಾಮಿ
ಬಾದಾಮಿ ಜೆಡಿಎಸ್ ಅಭ್ಯರ್ಥಿ ಘೋಷಣೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಟಕ್ಕರ್ title=
ಸಿದ್ದರಾಮಯ್ಯಗೆ ಟಕ್ಕರ್ ನೀಡಿದ ಎಚ್.ಡಿ.ಕುಮಾರಸ್ವಾಮಿ

ಬಾಗಲಕೋಟೆ: 10 ಕೆಜಿ ಉಚಿತ ಅಕ್ಕಿ ಕೊಟ್ಟು ನಾವು ನಿಮ್ಮನ್ನು ಬಿಕಾರಿ ಮಾಡುವುದಿಲ್ಲವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟಕ್ಕರ್ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ನಡೆದ ಜೆಡಿಎಸ್‍ ‘ಜನತಾ ಜಲಧಾರೆ ಸಂಕಲ್ಪ ಸಮಾವೇಶ’ದಲ್ಲಿ ಸೋಮವಾರ ಮಾತನಾಡಿರುವ ಅವರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿಗೆ ತರುತ್ತೇವೆ. ರಾಜ್ಯದಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಶಿಕ್ಷಣ ಮಾರಾಟದ ಸರಕಾಗಿದೆ. ನಾವು ಹಳ್ಳಿ ಹಳ್ಳಿಯಲ್ಲಿ ಸರ್ಕಾರಿ ಪಬ್ಲಿಕ್ ಶಾಲೆ ತೆರೆಯುತ್ತೇವೆ. ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ನಮ್ಮ ಪಂಚರತ್ನಗಳಲ್ಲೊಂದಾಗಿದೆ ಎಂದು ಎಚ್‍ಡಿಕೆ ಹೇಳಿದ್ದಾರೆ. ನಾವು ಉಚಿತವಾಗಿ 10 ಕೆಜಿ  ಅಕ್ಕಿ ಕೊಟ್ಟು ನಿಮ್ಮನ್ನು ಬಿಕಾರಿ‌ ಮಾಡುವುದಿಲ್ಲವೆಂದು ಇದೇ ವೇಳೆ ಸಿದ್ದರಾಮಯ್ಯಗೆ ಎಚ್‍ಡಿಕೆ ಟಕ್ಕರ್ ನೀಡಿದರು. ಸೀರೆ ಕೊಡ್ತಾರಂತೆ ಸೀರೆ… ಇವರು ನಿಮ್ಮ ಯಜಮಾನರು ನೋಡಿ.. ನಿಮ್ಮ ಯಜಮಾನರು ಸೀರೆ ಕೊಡಿಸದ ಸ್ಥಿತಿಗೆ ಇವರು ತಂದಿಟ್ಟಿದ್ದಾರೆ ಅಂತಾ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಮ ಭಜನೆಗೆ ಪೊಲೀಸ್ ತಡೆ.. ಸರ್ಕಾರದ ವಿರುದ್ಧ ಶ್ರೀರಾಮ ಸೇನೆ ಕಿಡಿ

545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮ ಎಲ್ಲಿಗೆ ಬಂದು ನಿಂತಿದೆ. ಸರ್ಕಾರಿ ನೌಕರಿಗಾಗಿ 70-80 ಲಕ್ಷ ರೂ. ಲಂಚದ ಹಣಕ್ಕೆ ಡಿಮ್ಯಾಂಡ್ ಇದೆ. ಇಲ್ಲಿ ಹಣ ಕೊಟ್ಟವರು ಕೋಡಂಗಿ, ಇಸಗೊಂಡವ ವೀರಭದ್ರ ಆಗಿದ್ದಾರೆ. ಧರ್ಮದ ಹೆಸರಲ್ಲಿ ನಾಡನ್ನು ಹಾಳು ಮಾಡುವವರ ಬಗ್ಗೆ ಗಮನ ಕೊಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಾನು ಬಾದಾಮಿಯ ತಂದೆ-ತಾಯಂದಿರ ಮುಖಾಂತರ ನಾಡಿನ ಜನತೆಗೆ ಮನವಿ ಮಾಡುತ್ತೇನೆ. ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಟ್ಟು ನೋಡಿ. ಇಡೀ ರಾಜ್ಯವನ್ನೇ ಅಭಿವೃದ್ಧಿ ಮಾಡುತ್ತೇವೆ. ಯಾರಿಗೆ ಮನೆಯಿಲ್ಲವೋ ಎಲ್ಲರಿಗೂ ಮನೆ ಕಟ್ಟಿಸಿಕೊಡುತ್ತೇವೆ. ಒಂದು ವೇಳೆ ಕೊಡದಿದ್ದರೆ ಮತ್ತೆಂದೂ ನಾನು ನಿಮ್ಮ ಬಳಿ ಮತ ಕೇಳುವುದಕ್ಕೆ ಬರುವುದಿಲ್ಲ. ನಮಗೆ ದುಡ್ಡು ಬೇಕಾಗಿಲ್ಲ ನಿಮ್ಮ ಸೇವೆ ಮಾಡುವ ಅವಕಾಶ ಬೇಕು ಎಂದು ಹೇಳಿದರು.

ಇದನ್ನೂ ಓದಿ: ಶೀಘ್ರದಲ್ಲೇ ಅಪಾಯದಲ್ಲಿರುವ ಕಟ್ಟಡಗಳ ತೆರವು: ಬಿಬಿಎಂಪಿ ಆಯುಕ್ತ

ಬಾದಾಮಿ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಎಚ್‍ಡಿಕೆ

ಬಾದಾಮಿಯಲ್ಲಿ ಜೆಡಿಎಸ್​ ಅಭ್ಯರ್ಥಿಯನ್ನಾಗಿ ಹನುಮಂತ ಮಾವಿನ ಮರದ್​ ಅವರ ಹೆಸರನ್ನು ಎಚ್‍ಡಿಕೆ ಘೋಷಣೆ ಮಾಡಿದ್ದಾರೆ. ಸದ್ಯ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಅಭ್ಯರ್ಥಿಯಾಗಿ ಸರಳ ವ್ಯಕ್ತಿತ್ವದ ಹನುಮಂತ ಕಣಕ್ಕಿಳಿಯಲಿದ್ದಾರೆ. ಅವರಲ್ಲಿರುವ ಸರಳತೆ-ಬದ್ಧತೆ ಮೆಚ್ಚುವಂತಹದ್ದು. ಇಂತಹ ನಾಯಕರು ಇಂದು ರಾಜ್ಯಕ್ಕೆ ಬೇಕಾಗಿದೆ. ನಿಮ್ಮ ನೋವಿಗೆ ಸ್ಪಂದಿಸುವ ಸರ್ಕಾರ ತರಲು ಹೊರಟಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘದ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News