ಮಿಸ್ಟರ್ ಸಿದ್ದಸೂತ್ರದಾರ, ಮಿಸ್ಟರ್ ಟರ್ಮಿನೇಟರ್, ಮಿಸ್ಟರ್ ಸಿದ್ದಕಲಾನಿಪುಣಪ್ಪಾ!: ಸಿದ್ದರಾಮಯ್ಯಗೆ ಎಚ್​ಡಿಕೆ ಡಿಚ್ಚಿ

ಮೈತ್ರಿ ಸರ್ಕಾರ ರಚಿಸಲು ಜೆಡಿಎಸ್‌ ನಾಯಕರ ಮನೆ ಬಾಗಿಲಿಗೆ ನಾನು ಹೋಗಿಲ್ಲವೆಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Written by - Zee Kannada News Desk | Last Updated : Dec 13, 2021, 03:25 PM IST
  • ಆಡಳಿತ ಪಕ್ಷದಲ್ಲೇ ಕೂತು ವಿರೋಧಿಗಳೊಂದಿಗೆ ಕುಮ್ಮಕ್ಕಾಗಿ ಬೆನ್ನಿಗಿರಿದ ‘ಬ್ರೂಟಸ್‌ʼ ಯಾರು..?
  • ಸಿಎಲ್‌ಪಿಯನ್ನೇ ಅಡ್ಡಡ್ಡ ‘ಸೀಳಿʼ ಬೆಂಬಲಿಗ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು?
  • ಮೈತ್ರಿ ಸರ್ಕಾರಕ್ಕೆ ಮೊದಲ ದಿನದಿಂದಲೇ ಮಹೂರ್ತ ಇಟ್ಟವರು ಯಾರು ಎಂದು ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ
ಮಿಸ್ಟರ್ ಸಿದ್ದಸೂತ್ರದಾರ, ಮಿಸ್ಟರ್ ಟರ್ಮಿನೇಟರ್, ಮಿಸ್ಟರ್ ಸಿದ್ದಕಲಾನಿಪುಣಪ್ಪಾ!: ಸಿದ್ದರಾಮಯ್ಯಗೆ ಎಚ್​ಡಿಕೆ ಡಿಚ್ಚಿ title=
ಜೆಡಿಎಸ್‌ ನಾಯಕರ ಮನೆ ಬಾಗಿಲಿಗೆ ಹೋಗಿಲ್ಲ ಎಂದಿದ್ದಕ್ಕೆ ಎಚ್‌ಡಿಕೆ ತರಾಟೆ

ಬೆಂಗಳೂರು: ಮಿಸ್ಟರ್ ಸಿದ್ದಸೂತ್ರದಾರ, ಮಿಸ್ಟರ್ ಟರ್ಮಿನೇಟರ್, ಮಿಸ್ಟರ್ ಸಿದ್ದಕಲಾನಿಪುಣಪ್ಪಾ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ರ ಹೆಸರು ಹೇಳದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಟೀಕಿಸಿದ್ದಾರೆ. ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ವೈಫಲ್ಯದ ವಿರುದ್ಧ ಕಿಡಿಕಾರಿದ್ದಾರೆ.

‘ಕಟ್ಟುವುದು ಮನುಷ್ಯತ್ವ, ಕೆಡವೋದು ರಾಕ್ಷಸತ್ವ. ನಿಮಗೆ ಕೆಡವಿ ಗೊತ್ತೇ ವಿನಾ ಕಟ್ಟಿ ಗೊತ್ತಿಲ್ಲ. ಬಿಜೆಪಿ(BJP)ಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್‌ ನಾಯಕರು ಸರ್ಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದಸೂತ್ರಧಾರ?’ ಅಂತಾ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Bangalore Power cut:ಬೆಂಗಳೂರಿಗರೇ ಎಚ್ಚರ... ಈ 3 ದಿನ ಕೈ ಕೊಡಲಿದೆ ಕರೆಂಟ್.!

‘ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ, ನನ್ನ ಹಂತದಲ್ಲಿ ಅಲ್ಲ ಅನ್ನುತ್ತೀರಿ! ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ(Rahul Gandhi) ಅವರ ಮಾತಿಗೇ ನಿಮ್ಮಲ್ಲಿ ಕಿಮ್ಮತ್ತಿಲ್ಲಾ? ಹಾಗಾದರೆ ಸಿಎಲ್‌ಪಿಯನ್ನೇ ಅಡ್ಡಡ್ಡ ‘ಸೀಳಿʼ ಬೆಂಬಲಿಗ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು? ವರಿಷ್ಠರು ತಂದ ಸರಕಾರವನ್ನೇ ತೆಗೆದಿರಿ, ಬಿಜೆಪಿ ಸರ್ಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಬಿಜೆಪಿ ಸರಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು? ಇಷ್ಟೆಲ್ಲಾ ‘ಸಿದ್ದಕಲೆʼ ಎಲ್ಲಿಂದ ಬಂತು ಮಿಸ್ಟರ್ ಸಿದ್ದಕಲಾನಿಪುಣಪ್ಪಾ!?’ ಅಂತಾ ಎಚ್‌ಡಿಕೆ ಕುಟುಕಿದ್ದಾರೆ.

‘ಹೈಕಮಾಂಡ್ ನಿರ್ಧಾರಕ್ಕೂ ಗುನ್ನ, ಅಹಿಂದದ ಹೆಸರಿನಲ್ಲಿ ದಲಿತ ನಾಯಕರಾದ ಖರ್ಗೆ ಅವರಿಗೂ ಖೆಡ್ಡಾ, ಡಾ.ಜಿ.ಪರಮೇಶ್ವರ್(G.Parameshwar) ಅವರಿಗೆ ಸೋಲಿನ ಸುಳಿ, ಈಗ ನೋಡಿದರೆ ‘ಬಂಡೆʼಯ ಕೆಳಗೂ ಡೈನಾಮೈಟ್ ಇಡುತ್ತಿರುವ ಅನೈತಿಕ, ನೀಚ, ನಿಕೃಷ್ಟ, ಹೀನ ರಾಜಕಾರಣಕ್ಕೆ ನಾಂದಿ ಹಾಡಿರುವ ಪರಮಪಾತಕ  ಪರಾಕಾಷ್ಠೆ ಯಾರು?’ ಅಂತಾ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಕಲಿ ‘ಕೊರೊನಾ’ ರಿಪೋರ್ಟ್ ಕೊಟ್ಟ ಆರೋಪ - ನಾಲ್ಕು ಜನರ ಬಂಧನ

‘ಜೆಡಿಎಸ್‌(JDS Party) ಬಿಜೆಪಿಯ ‘ಬಿ’ ಟೀಂ ಅನ್ನುತ್ತೀರಿ. ಹಾಗಾದರೆ ಆಡಳಿತ ಪಕ್ಷದಲ್ಲೇ ಕೂತು ವಿರೋಧಿಗಳೊಂದಿಗೆ ಕುಮ್ಮಕ್ಕಾಗಿ ಬೆನ್ನಿಗಿರಿದ ‘ಬ್ರೂಟಸ್‌ʼ ಯಾರು? ಮೈತ್ರಿ ಸರ್ಕಾರಕ್ಕೆ ಮೊದಲ ದಿನದಿಂದಲೇ ಮಹೂರ್ತ ಇಟ್ಟವರು ಯಾರು? ಸ್ವಯಂಘೋಷಿತ ಅಹಿಂದ ನಾಯಕರೇ ನಿಮ್ಮೊಳಗಿದೆ ಕಾರ್ಕೋಟಕ ‘ವಿಷʼ. ಆ ವಿಷವೇ ನಿಮಗೆ ಮುಳುವು. ಅಹಾ!! ಕೋಲಾರದಲ್ಲಿ ಕಲರ್‌ಫುಲ್‌ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸಿ ಕೃತಾರ್ಥರಾಗಿದ್ದೀರಿ. ‘ಅಡ್ಜಸ್ಟ್‌ ಮೆಂಟ್‌ ರಾಜಕಾರಣʼದ ಹರಿಕಾರರು ನೀವಲ್ಲವೇ?’ ವಿನಾಶಕಾಲೇ ವಿಪರೀತ ಸುಳ್ಳು!’ ಅಂತಾ ಎಚ್‌ಡಿಕೆ(HDK) ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News