ಬಳ್ಳಾರಿಗೆ ಬಂದ ರಾಹುಲ್ ಗಾಂಧಿಗೆ ಭವ್ಯ ಸ್ವಾಗತ ಕೋರಿದ ಸಚಿವ ಶ್ರೀರಾಮುಲು

ಬಳ್ಳಾರಿಗೆ ಆಗಮಿಸಿರುವ ಕಾಂಗ್ರೆಸ್ ಪಕ್ಷದ ‘ಭಾರತ್ ತೋಡೋ ಯಾತ್ರೆ’ಗೆ ಹಾರ್ದಿಕ ಸುಸ್ವಾಗತವೆಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

Written by - Puttaraj K Alur | Last Updated : Oct 15, 2022, 01:28 PM IST
  • ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುನರ್ ಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ ಏನು ಮಾಡಿದೀರಿ?
  • ಬಳ್ಳಾರಿ ಜನತೆಗೆ ಚೂರಿ ಹಾಕಿ ಹೋಗಿದ್ದ ಕಾಂಗ್ರೆಸ್ ಪಕ್ಷದ ‘ಭಾರತ್ ತೋಡೋ ಯಾತ್ರೆ’ಗೆ ಹಾರ್ದಿಕ ಸುಸ್ವಾಗತ!
  • ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಗೆ ವ್ಯಂಗ್ಯವಾಡಿದ ಸಚಿವ ಬಿ.ಶ್ರೀರಾಮುಲು
ಬಳ್ಳಾರಿಗೆ ಬಂದ ರಾಹುಲ್ ಗಾಂಧಿಗೆ ಭವ್ಯ ಸ್ವಾಗತ ಕೋರಿದ ಸಚಿವ ಶ್ರೀರಾಮುಲು title=
ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಶ್ರೀರಾಮುಲು

ಬೆಂಗಳೂರು: 1999ರ ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಸೋಲಬಹುದೆಂಬ ಭೀತಿಯಿಂದ ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುನರ್ ಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಗೆ ಚೂರಿ ಹಾಕಿ ಹೋಗಿದ್ದ ಕಾಂಗ್ರೆಸ್ ಪಕ್ಷದ ‘ಭಾರತ್ ತೋಡೋ ಯಾತ್ರೆ’ಗೆ ಹಾರ್ದಿಕ ಸುಸ್ವಾಗತ!’ವೆಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯನ್ನು ಟೀಕಿಸಿದ್ದಾರೆ. ‘ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಗೆದ್ದು, ಸೌಜನ್ಯಕ್ಕಾದರೂ ಜನತೆಗೆ ಧನ್ಯವಾದಗಳನ್ನು ತಿಳಿಸದೇ, ದೆಹಲಿಯಿಂದಲೇ ರಾಜೀನಾಮೆ ಪತ್ರ ಬಿಸಾಕಿದ ಖಾಯಂ ಎಐಸಿಸಿ AICC ಅಧ್ಯಕ್ಷರ ಮುದ್ದಿನ ಪುತ್ರ ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸುತ್ತಿರುವುದಕ್ಕೆ ನಿಮಗಿದೋ ಭವ್ಯ ಸ್ವಾಗತ’ ಅಂತಾ ಕುಟುಕಿದ್ದಾರೆ.

‘ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು‌ ಬಿಡುತ್ತಾ ಕೈಲಾಗದಿದ್ದರೂ ಎದ್ದೋ ಬಿದ್ದನಂತೆ ಓಡುತ್ತಾ, ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತಾ, ಹಾವು- ಮುಂಗುಸಿಯಂತೆ ಇದ್ದರೂ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆಂದು ಕ್ಯಾಮೆರಾ ಮುಂದೆ ಪೋಸು ನೀಡುವ ಕೆಪಿಸಿಸಿ ಮಹಾನ್ ನಾಯಕರೆಲ್ಲರಿಗೂ ಸುಸ್ವಾಗತ. ನಾವು ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಬದಲಿಗೆ ನಮ್ಮ ತಾಯಿಯನ್ನು ಗೆಲ್ಲಿಸಿದ್ದಕ್ಕೆ ಜನಾದೇಶವನ್ನು ದಿಕ್ಕರಿಸಿ ರಾಜೀನಾಮೆ ನೀಡಿದ್ದಕ್ಕೆ, ಅಧಿಕಾರದಲ್ಲಿದ್ದಾಗ ಏನು ಮಾಡದೆ ಮತದಾರರ ಕ್ಷಮೆ ಕೇಳುವ ಪ್ರಾಯಶ್ಚಿತ ಯಾತ್ರೆ ಮಾಡುತ್ತಿದ್ದೇವೆಂದು ಹೇಳಲು ಸಂಕೋಚ ಏಕೆ?’ ಅಂತಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚರ್ಮಗಂಟು ರೋಗ ನಿರ್ವಹಣೆಗೆ 13 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಆದೇಶ

‘1999ರ ಲೋಕಸಭಾ ಚುನಾವಣೆ ನಂತರ ಬಳ್ಳಾರಿ ಜಿಲ್ಲೆಗೆ 3300 ಕೋಟಿ ರೂ.ಗಳ ಸುಳ್ಳು ಪ್ಯಾಕೇಜ್ ಅನ್ನು ನಿಮ್ಮ ಮಾತೃಶ್ರೀ ಸೋನಿಯಾ ಗಾಂಧಿಯವರು ಘೋಷಣೆ ಮಾಡಿದ್ದರು ಎಂಬುದನ್ನು ರಾಹುಲ್ ಗಾಂಧಿಗೆ ನೆನಪಿಲು ಇಚ್ಛೇಸುತ್ತೇನೆ. ಬಳ್ಳಾರಿ ಜನತೆ ಸೋನಿಯಾ ಗಾಂಧಿ  ಘೋಷಿಸಿದ ಪ್ಯಾಕೇಜ್ ಬಂದೇ ಬರುತ್ತದೆ ಎಂದು ಕಣ್ ಕಣ್ ಬಿಟ್ಟಿದ್ದೇ ಆಯಿತು, ಆದರೆ ಅದು ಎಲ್ಲಿಗೆ ಬಂತು? ಯಾವಾಗ ಬಂತು? ಯಾರಿಗೆ ಹೋಯಿತು? ಯಾರ  ಜೇಬಿಗೆ ಸೇರಿತು? ಕಾಂಗ್ರೆಸ್‍ನ ನಾಯಕರ ಬಳಿ ಉತ್ತರ ಇದೆಯೇ?’ ಅಂತಾ ಪ್ರಶ್ನಿಸಿದ್ದಾರೆ.

‘ಸೋನಿಯಾಗಾಂಧಿ ಸ್ಪರ್ಧೆ ಮಾಡಿದಾಗ ಅವರ ಮೇಲಿನ ಪ್ರೀತಿ, ಅಭಿಮಾನದಿಂದ ಆಶೀರ್ವಾದ ಮಾಡಿದರು. ಗೆದ್ದ ಮೇಲೆ ಇಲ್ಲಿಗೆ ಎಷ್ಟು ಸಲ ಬಂದರು? ಕನಿಷ್ಟ ಪಕ್ಷ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಸೌಜನ್ಯಕ್ಕಾದರೂ ಕೃತಜ್ಞತೆ ಹೇಳಿದ್ದಾರಾ? ಇದನ್ನು ಜನತೆಯ ಮುಂದಿಡಲು ಸಿದ್ದರಿದ್ದೀರಾ? ಬಳ್ಳಾರಿ ಜಿಲ್ಲೆಗೆ ಸೋನಿಯಾಗಾಂಧಿ ಆಗಲಿ ಅಥವಾ ಕಾಂಗ್ರೆಸ್‍ನ ಕೊಡುಗೆ ಏನು ಎಂಬುದನ್ನು ಅವರ ಪುತ್ರ ರಾಹುಲ್ ಗಾಂಧಿಯವರೇ ಹೇಳಬೇಕು. ದೇಶ ಬೆಸೆಯುತ್ತೇನೆಂದು ಹೊರಟಿರುವ ಅವರಿಗೆ ಜಿಲ್ಲೆಯ ಜನ ಪಾಠ ಕಲಿಸಲಿದ್ದಾರೆ ಎಂಬುದನ್ನು ಮರೆಯಬೇಡಿ’ ಅಂತಾ ಶ್ರೀರಾಮುಲು ಕಿಡಿಕಾರಿದ್ದಾರೆ.

‘ಕಡೆ ಪಕ್ಷ 5 ವರ್ಷಗಳ ಕಾಲ ಅಧಿಕಾರದಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷ ಬಳ್ಳಾರಿಗೆ ಜಿಲ್ಲೆಗೆ ಕೊಡುಗೆ ಏನು ?. ರಾಹುಲ್ ಗಾಂಧಿಯವರೇ ನಿಮ್ಮ ಭಾಷಣದಲ್ಲಿ ಹೇಳುತ್ತೀರಾ.? ನಿಮ್ಮಬೆಸುಗೆಯ ಯಾತ್ರೆಗೆ ಜನ ಬಗ್ಗೋದಿಲ್ಲ. ಅವರನ್ನು TAKEN FOR GRANTED ಮಾಡಿಕೊಂಡಿದ್ದೀರಾ? ಏಕಂದರೆ ಬಳ್ಳಾರಿ ಜಿಲ್ಲೆಗೆ ಸೋನಿಯಾ ಗಾಂಧಿಯವರು ಒಮ್ಮೆ ಲೋಕಸಭಾ ಸದಸ್ಯರಾಗಿ ಕೊಟ್ಟ ಕೊಡುಗೆ ಶೂನ್ಯ. ಅದನ್ನು ರಾಹುಲ್‌ ಗಾಂಧಿ ಮರೆತರೂ, ಜನ ಮರೆತಿಲ್ಲ. ಯಾತ್ರೆಯ ಮೂಲಕ ಮರೆ ಮಾಚಲು ಸಾಧ್ಯವಿಲ್ಲ’ವೆಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ರಾಮನಾಮ ಜಪಿಸುವಂತೆ ಮಾಡಿದ್ದಾರೆ: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News