ಸಿದ್ದರಾಮಯ್ಯ ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುತ್ತಾರೆ: ಕಟೀಲ್

'ಹರ್ ಘರ್ ತಿರಂಗಾ’ದ ಬಗ್ಗೆ ವ್ಯಂಗ್ಯವಾಡುತ್ತಾ ಯಡವಟ್ಟು ಮಾಡಿದ್ದ ಸಿದ್ದರಾಮಯ್ಯ, ಬಾವುಟದ ಬಣ್ಣ ಕೇಸರಿ, ಬಿಳಿ, ಹಸಿರು ಎನ್ನುವ ಬದಲಿಗೆ ಕೆಂಪು, ಬಿಳಿ, ಹಸಿರು ಎಂದು ಹೇಳಿದ್ದರು.

Written by - Puttaraj K Alur | Last Updated : Aug 8, 2022, 04:59 PM IST
  • ರಾಷ್ಟ್ರಧ್ವಜದ ಬಗ್ಗೆ ತಪ್ಪು ಹೇಳಿಕೆ ನೀಡಿದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
  • ರಾಷ್ಟ್ರಧ್ವಜದಲ್ಲಿರುವ ಕೇಸರಿ ವರ್ಣದ ವಿರುದ್ಧದ ದ್ವೇಷವನ್ನು ದೇಶಭಕ್ತ ಬಂಧುಗಳು ಸಹಿಸುವುದಿಲ್ಲ- ಕಟೀಲ್
  • RSS -ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವ ಸಿದ್ದರಾಮಯ್ಯರಿಗೆ ರಾಷ್ಟ್ರಪ್ರೇಮಿಗಳಿಗೆ ಕಾಂಗ್ರೆಸ್ ದ್ರೋಹದ ನೆನಪಿಲ್ಲ
ಸಿದ್ದರಾಮಯ್ಯ ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುತ್ತಾರೆ: ಕಟೀಲ್ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಬೆಂಗಳೂರು: ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುವ ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ‍್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಹರ್ ಘರ್ ತಿರಂಗಾ’ದ ಬಗ್ಗೆ ವ್ಯಂಗ್ಯವಾಡುತ್ತಾ ಯಡವಟ್ಟು ಮಾಡಿದ್ದ ಸಿದ್ದರಾಮಯ್ಯ, ಬಾವುಟದ ಬಣ್ಣ ಕೇಸರಿ, ಬಿಳಿ, ಹಸಿರು ಎನ್ನುವ ಬದಲಿಗೆ ಕೆಂಪು, ಬಿಳಿ, ಹಸಿರು ಎಂದು ತಪ್ಪಾಗಿ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ರಾಷ್ಟ್ರಧ್ವಜದಲ್ಲಿರುವ ಕೇಸರಿ ವರ್ಣದ ವಿರುದ್ಧದ ಇವರ ದ್ವೇಷವನ್ನು ದೇಶಭಕ್ತ ಬಂಧುಗಳು ಸಹಿಸುವುದಿಲ್ಲ. ಕೇಸರಿ ಕಂಡರೆ ಉರಿದು ಬೀಳುವ ಸಿದ್ದರಾಮಯ್ಯನವರು ಈಗ ದೇಶದ ರಾಷ್ಟ್ರಧ್ವಜದಲ್ಲಿರುವ ವರ್ಣವನ್ನೇ ಬದಲಾಯಿಸಲು ಹೊರಟಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ? ಕೇಸರಿ ಕಂಡರೆ ಅಷ್ಟು ದ್ವೇಷ ಯಾಕೆ ಸಿದ್ದರಾಮಯ್ಯನವರೇ?’ ಎಂದು ಕಟೀಲ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: B Sriramulu : 'ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ'

ನಿಮ್ಮ ಕೊಡುಗೆ ಏನು ಸಿದ್ದರಾಮಯ್ಯ?

ಸಿದ್ದರಾಮಯ್ಯರ ತಪ್ಪು ಹೇಳಿಕೆಗೆ ಕಿಡಿಕಾರಿರುವ ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್‌ ಕುಮಾರ್‌, ‘ಸಿದ್ದರಾಮಯ್ಯರಿಗೆ ತಡವಾಗಿಯಾದರೂ ಸ್ವಾತಂತ್ರ್ಯ, ರಾಷ್ಟ್ರಧ್ವಜ, ದೇಶಪ್ರೇಮದ ಬಗ್ಗೆ ಕಾಳಜಿ ಮೂಡಿದೆ’ ಎಂದು ಕುಟುಕಿದ್ದಾರೆ. ‘ಸದಾ ಜಾತಿ ವಿಭಜನೆ, ಧರ್ಮ ವಿಭಜನೆಯ ಬಗ್ಗೆ ಚಿಂತನೆ ಮಾಡುವ ಅವರಿಗೆ ರಾಷ್ಟ್ರೀಯ ವಿಚಾರಧಾರೆಯ ನೆನಪಾಗಿರುವುದು ಈ ಶತಮಾನದ ಆಶ್ಚರ್ಯಗಳಲ್ಲಿ ಒಂದು. RSS ಹಾಗೂ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವ ಸಿದ್ದರಾಮಯ್ಯರಿಗೆ ರಾಷ್ಟ್ರಪ್ರೇಮಿಗಳಿಗೆ ಕಾಂಗ್ರೆಸ್ ಮಾಡಿದ ದ್ರೋಹದ ನೆನಪಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಹೋದ ದೇಶಪ್ರೇಮಿಗಳ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದೇ ಕಾಂಗ್ರೆಸ್ ಸರ್ಕಾರ’ವೆಂದು ಟ್ವೀಟ್ ಮಾಡಿದ್ದಾರೆ.

‘ಮಾತೆತ್ತಿದರೆ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿರುವ ಕೊಡುಗೆ ಏನು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ. ಹಾಗಾದರೆ ನಿಮ್ಮ ಕೊಡುಗೆ ಏನು? ನೀವು ಹುಟ್ಟುತ್ತಲೇ ಹೋರಾಟಕ್ಕೆ ಇಳಿದವರಾ? ಅಥವಾ ಜನನಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದೆ ಎಂದು ಹೊಸ ಸುಳ್ಳು ಹೇಳಲು ಹೊರಟಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: "ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ?"

‘ಒಂದು ದೇಶದಲ್ಲಿ 2 ಧ್ವಜ, ಇಬ್ಬರು ಪ್ರಧಾನಿ ಎಂಬುದು ನಡೆಯುವುದಿಲ್ಲ ಎಂದು ಕಾಶ್ಮೀರ ವಿಮೋಚನೆಗೆ ಹೋರಾಟ ನಡೆಸಿದ ಶ್ಯಾಮ ಪ್ರಸಾದ್ ಮುಖರ್ಜಿಯವರು ನಿಗೂಢ ಸಾವು ಕಂಡರು. ಇದರ ಹಿಂದಿದ್ದ ‘ಕೈ’ವಾಡ ಕೊನೆಗೂ ಬಯಲಾಗಲೇ ಇಲ್ಲ. ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜ ಹಾರಿಸುವುದಕ್ಕೂ ಕಾಂಗ್ರೆಸ್ ಅಡ್ಡಿಪಡಿಸಿದ್ದನ್ನು ನಾವು ನೆನಪಿಸಬೇಕೇ? ರಾಷ್ಟ್ರಧ್ವಜದ ಬಗ್ಗೆ ನಿಮಗಿರುವ ಗೌರವ ಎಷ್ಟೆಂಬುದು ನಿಮ್ಮ ಭಾಷಣದಿಂದಲೇ ಅರ್ಥವಾಗುತ್ತದೆ. ಧ್ವಜದ ಬಣ್ಣ ಕೆಂಪು, ಬಿಳಿ, ಹಸಿರು ಎಂದಿದ್ದೀರಿ. ನಿಮ್ಮ ರಾಷ್ಟ್ರಭಕ್ತಿಯ ಜ್ಞಾನ ಅಸದಳ’ ಎಂದು ಟೀಕಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News