ನವದೆಹಲಿ: ಪಾಕಿಸ್ತಾನವು ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕೆಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರ ಕ್ಕೆ ನೀಡಲಾದ ೩೭೦ನೇ ವಿಧಿಯನ್ನು ಹಿಂತೆಗೆದುಕೊಂಡ ನಿರ್ಧಾರಕ್ಕೆ ಪ್ರತಿಯಾಗಿ ಭಾರತದ ಜೊತೆಗಿನ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಭಂದವನ್ನು ಕಡಿತಗೊಳಿಸುವುದಾಗಿ ಪಾಕ್ ಘೋಷಿಸಿಕೊಂಡಿತ್ತು. ಅಲ್ಲದೆ ನಿನ್ನೆ ಅದು ಭಾರತ- ಪಾಕ್ ನಡುವೆ ಸಂಚರಿಸುವ ಸಂಜೋತಾ ಎಕ್ಷ್ಪ್ರೆಸ್ ನ್ನು ಏಕಾಏಕಿ ರದ್ದು ಪಡಿಸಿತ್ತು. ಇಂದು ಇದರ ಜೊತೆಗೆ ಥಾರ್ ಎಕ್ಷ್ಪ್ರೆಸ್ ನ್ನು ಸಹಿತ ಅದು ನಿಲ್ಲಿಸಿದೆ.
ಈ ಹಿನ್ನಲೆ ಪಾಕಿಸ್ತಾನದ ಕ್ರಮಗಳಿಗೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ 'ಪಾಕಿಸ್ತಾನ ಕೈಗೊಂಡ ಕ್ರಮಗಳು ಏಕಪಕ್ಷೀಯವಾಗಿದೆ. ನಮ್ಮೊಂದಿಗೆ ಸಮಾಲೋಚಿಸದೆ ಇದನ್ನು ಮಾಡಲಾಗಿದೆ. ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ಅವರನ್ನು ಒತ್ತಾಯಿಸಿದ್ದೇವೆ. ಪಾಕಿಸ್ತಾನವು ಏನೇ ಮಾಡಿದರೂ ದ್ವಿಪಕ್ಷೀಯ ಸಂಬಂಧದ ಆತಂಕಕಾರಿ ಚಿತ್ರವನ್ನು ಪ್ರಸ್ತುತಪಡಿಸುತ್ತದೆ ಎಂದರು.
370 ನೇ ವಿಧಿ ವಿರುದ್ಧವಾಗಿ ಪಾಕಿಸ್ತಾನದ ಪುನರಾವರ್ತಿತ ಪ್ರತಿಭಟನೆಗಾಗಿ ಪ್ರತಿಕ್ರಿಯಿಸಿದ ರವೀಶ್ ಕುಮಾರ್, "ಇದು ಪಾಕಿಸ್ತಾನವು ವಾಸ್ತವವನ್ನು ಒಪ್ಪಿಕೊಳ್ಳುವ ಮತ್ತು ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವ ಸಮಯ" ಎಂದು ಹೇಳಿದರು.