ನವದೆಹಲಿ: ಭಾರತದಿಂದ ಪಲಾಯನಗೈದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯಗೆ ಬ್ರಿಟನ್ ನಲ್ಲಿ ಭಾರಿ ಹಿನ್ನಡೆ ಉಂಟಾಗಿದೆ. ಹೌದು. ಭಾರತಕ್ಕೆ ಹಸ್ತಾಂತರಿಸುವ ಕುರಿತು ಲಂಡನ್ ಹೈ ಕೋರ್ಟ್ ನೀಡಿದ್ದ ತೀರ್ಪನ್ನು ಅಲ್ಲಿನ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಅನುಮತಿ ಕೋರಿ ಬ್ರಿಟಿಷ್ ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಮಲ್ಯಗೆ ಇದೀಗ ಭಾರತಕ್ಕೆ ಮರಳುವ ಅನಿವಾರ್ಯತೆ ಎದುರಾಗಿದೆ.
ತಾವು ಪಡೆದ ಸಾಲದ ಕುರಿತು ಇಂದೇ ಟ್ವೀಟ್ ವೊಂದನ್ನು ಮಾಡಿದ್ದ ಮದ್ಯ ದೊರೆ, ತಾವು ಪಡೆದ ಶೇ.100 ರಷ್ಟು ಸಾಲವನ್ನು ಮರುಪಾವತಿಸಲು ಸಿದ್ಧರಾಗಿದ್ದು, ತಮ್ಮ ಪ್ರಸ್ತಾವನೆಯನ್ನು ಒಪ್ಪಿಕೊಂಡು ತಮ್ಮ ವಿರುದ್ಧದ ಪ್ರಕರಣ ವನ್ನು ಮುಚ್ಚಿ ಹಾಕುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೆ ವೇಳೆ ಕೊವಿಡ್ 19 ಪ್ರಕೋಪದ ಹಿನ್ನೆಲೆ ಭಾರತ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ಬಗ್ಗೆ ಭಾರತ ಸರ್ಕಾರವನ್ನು ಅಭಿನಂದಿಸಿದ್ದರು ಹಾಗೂ ಬಾಕಿ ಹಣವನ್ನು ಮರುಪಾವತಿಸುವ ಕುರಿತು ತಾವು ಸಲ್ಲಿಸಿರುವ ಪ್ರಸ್ತಾಪಗಳನ್ನು ಪದೇ ಪದೇ ನಿರ್ಲಕ್ಷಿಸಲಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಮಲ್ಯ, " ಕೊವಿಡ್ -19 ಪರಿಹಾರಕ್ಕಾಗಿ ಘೋಷಿಸಲಾಗಿರುವ ಆರ್ಥಿಕ ಪ್ಯಾಕೇಜ್ ಗೆ ಅಭಿನಂದನೆಗಳು. ನೀವು ಎಷ್ಟು ಬೇಕೋ ಅಷ್ಟು ಹಣವನ್ನು ಮುದ್ರಿಸಬಹುದು. ಆದರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವೊಂದರಿಂದ ಸಾಲ ಪಡೆದ ನನ್ನಂತಹ ಸಣ್ಣ ವ್ಯಕ್ತಿ ಶೇ.100 ರಷ್ಟು ಹಣವನ್ನು ಮಾರುಪಾವತಿಸಲು ಸಿದ್ಧನಿರುವಾಗ ನಿರ್ಲಕ್ಷಿಸುವುದು ಉಚಿತವೆ" ಎಂದು ಬರೆದುಕೊಂಡಿದ್ದರು.
ವಿಜಯ್ ಮಲ್ಯ ಸದ್ಯ ಭಾರತದಲ್ಲಿ ನಿಷ್ಕ್ರೀಯಗೊಂಡ ವಿಮಾನಯಾನ ಸಂಸ್ಥೆ ಕಿಂಗ್ ಫಿಷರ್ ಏರ್ಲೈನ್ಸ್ ನ ಮಾಲೀಕರಾಗಿದ್ದಾರೆ. ಅಷ್ಟೇ ಅಲ್ಲ 9,000 ಕೋಟಿ ರೂ.ಗಳ ವಂಚನೆ ಹಾಗೂ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ರೇಡಾರ್ ಮೇಲಿದ್ದು, "ದಯವಿಟ್ಟು ನನ್ನಿಂದ ಯಾವುದೇ ಷರತ್ತು ಇಲ್ಲದೆ ಹಣವನ್ನು ಪಡೆದುಕೊಂಡು ಇಡೀ ಪ್ರಕರಣವನ್ನು ಮುಗಿಸಿ" ಎಂದು ಕೇಳಿಕೊಂಡಿದ್ದಾರೆ.