ಹಾಸನ: ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಲ್ಲಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಸನದಲ್ಲಿ ಹೇಳಿಕೆ ನೀಡಿದ್ದಾರೆ.
ನಾನು ವ್ಹೀಲ್ ಚೇರ್ ನಲ್ಲಿ ಸಂಸತ್ ಗೆ ಹೋಗಲು ಬಯಸಲ್ಲ. ಹಾಗಾಗಿ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಲ್ಲಲ್ಲ. ಜಿಲ್ಲೆಯ ನಮ್ಮ ಪಕ್ಷದ ನಾಯಕರ ಅಭಿಪ್ರಾಯ ಕೇಳುವೆ ಅವರು ಸ್ಪರ್ಧೆ ಮಾಡದೇ ಹೋದರೆ ಪ್ರಜ್ವಲ್ ನನ್ನು ಲೋಕಸಭೆಗೆ ಕಳಿಸಬೇಕು ಎಂಬ ಆಸೆ ಇದೆ ಎಂದು ಹೆಚ್ಡಿಡಿ ತಿಳಿಸಿದರು.
ಜೆಡಿಎಸ್ ಭದ್ರಕೋಟೆಗೆ ಮೊಮ್ಮಗ ಉತ್ತರಾಧಿಕಾರಿ
ಜೆಡಿಎಸ್ ಭದ್ರಕೋಟೆಯಾದ ದೇವೇಗೌಡರ ತವರು ಜಿಲ್ಲೆಗೆ ಉತ್ತರಾಧಿಕಾರಿ ತಮ್ಮ ಮೊಮ್ಮಗ ಎಂಬ ಸುಳಿವು ನೀಡಿರುವ ದೊಡ್ಡಗೌಡರು, ಮೊಮ್ಮಗ ವಿದ್ಯಾವಂತ, ಕೊಂಚ ದುಡುಕು ಬುದ್ಧಿಅಷ್ಟೆ ನನ್ನ ಬಿಟ್ಟು ಬೇರೆಯವರು ಸ್ಪರ್ಧೆ ಮಾಡಿದ್ರೆ ಸ್ವಾಗತ ಇಲ್ಲವಾದ್ರೆ ಪ್ರಜ್ವಲ್ ನನ್ನು ಮಗನೆಂದು ತಿಳಿದು ಗೆಲ್ಲಿಸಲಿ ಎಂದರು.
ಚುನಾವಣಾ ಪೂರ್ವ ಸರ್ವೇಗೆ ಹೆಚ್ಡಿಡಿ ಪ್ರತಿಕ್ರಿಯೆ?
ನಾನು ಚುನಾವಣಾ ಪೂರ್ವ ಸರ್ವೇ ನೋಡಿ ಸುಮ್ಮನೆ ಕೂರೋದಿಲ್ಲ. ಈ ಬಾರಿ ಕಾಂಗ್ರೆಸ್- ಬಿಜೆಪಿ ಬಿಟ್ಟು ಸರ್ಕಾರ ರಚಿಸಬೇಕು ಎಂಬ ಹಠ ನನ್ನದು ಎಂದು ಪ್ರತಿಕ್ರಿಯಿಸಿರುವ ಹೆಚ್ಡಿಡಿ, ಈ ಬಾರಿಯ ಚುನಾವಣೆಯಲ್ಲಿ 115 ಸ್ಥಾನ ಗೆಲ್ಲುವುದು ನನ್ನ ಟಾರ್ಗೆಟ್, ಚುನಾವಣೆಗೆ ಇನ್ನೂ 45 ದಿನ ಬಾಕಿ ಇದೆ. ಅಷ್ಟು ದಿನ ವಿರಮಿಸದೇ ನಾನು ರಾಜ್ಯ ಸುತ್ತುತ್ತೇನೆ ಎಂದು ತಿಳಿಸಿದರು.