23 ದಿನಗಳ ಬಳಿಕ ಹೂತಿದ್ದ ಶವ ಹೊರತೆಗೆದ ಖಾಕಿ: ಕಾರಣ..?

Bengaluru Crime News: ಜೀವನಕ್ಕಾಗಿ ಚಿಂದಿ ಆಯುವ ಕೆಲಸ‌ ಮಾಡಿಕೊಂಡಿದ್ದ ಮೊಹಮ್ಮದ್ ರಂಜಾನ್ ಬಳಿ ಮೃತ ರಸೂಲ್‌ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ಸಂಬಳ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು.

Written by - VISHWANATH HARIHARA | Edited by - Puttaraj K Alur | Last Updated : Feb 8, 2023, 11:17 AM IST
  • 23 ದಿನಗಳ ಬಳಿಕ ನೇಣಿಗೆ ಶರಣಾಗಿದ್ದ ಯುವಕನ ಹೂತಿದ್ದ ಶವ ಹೊರತೆಗೆದ ಪೊಲೀಸರು
  • ನ್ಯಾಯಾಲಯದ ಅನುಮತಿ ಪಡೆದು ಶವ ಹೊರತೆಗೆದ ಕಾಡುಗೋಡಿ ಠಾಣೆ ಪೊಲೀಸರು
  • ಸಂಬಳ ವಿಚಾರಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದ ಪಶ್ಚಿಮ ಬಂಗಾಳ ಮೂಲದ‌ ವ್ಯಕ್ತಿ
23 ದಿನಗಳ ಬಳಿಕ ಹೂತಿದ್ದ ಶವ ಹೊರತೆಗೆದ ಖಾಕಿ: ಕಾರಣ..? title=
ಹೂತಿದ್ದ ಶವ ಹೊರತೆಗೆದ ಪೊಲೀಸರು!

ಬೆಂಗಳೂರು: ನೇಣಿಗೆ ಶರಣಾಗಿದ್ದ ಯುವಕನ ಹೂತಿದ್ದ ಶವವನ್ನು 23 ದಿನಗಳ ಬಳಿಕ ಕಾಡುಗೋಡಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಹೊರತೆಗೆದಿದ್ದಾರೆ. ಪಶ್ಚಿಮ ಬಂಗಾಳ ಮೂಲದ‌ 27 ವರ್ಷದ ಎಂ.ಡಿ.ರಸೂಲ್ ಹೌಲಾದಾರ್ ಕಳೆದ ತಿಂಗಳು 14ರಂದು ನೇಣು ಬಿಗಿದುಕೊಂಡು ಮೃತಪಟ್ಟಿದ್ದ. ಈತನ ಶವವನ್ನು ಯಾರಿಗೂ ಗೊತ್ತಾಗದಂತೆ ಹೂತಿದ್ದ ಮೊಹಮ್ಮದ್ ರಂಜಾನ್ ಹಾಗೂ ರಸೆಲ್ ಬಂಧಿತ ಆರೋಪಿಗಳು.

ಮೃತ ಎಂ.ಡಿ.ರಸೂಲ್ ಹೌವಲದಾರ್ ಆತ್ಮಹತ್ಯೆ ಮಾಡಿಕೊಂಡಿದ್ದ.‌ ಆದರೆ ಆರೋಪಿಗಳು ಸಹಜ ಸಾವು ಎಂಬಂತೆ ಬಿಂಬಿಸಿ ಖಾಜಿಸೊನ್ನೇನಹಳ್ಳಿ ಬಳಿಯ ಜಾಮೀಯಾ ಮಸೀದಿ ಬಳಿ ಮಣ್ಣು ಮಾಡಿದ್ದರು. ಕೆಲ ದಿನಗಳ ಬಳಿಕ ಮೃತನ ತಂದೆ ಅನುಮಾನಗೊಂಡು ತಮ್ಮ ಮಗನ ಸಾವು ಸಹಜ ಸಾವಲ್ಲವೆಂದು ಆರೋಪಿಸಿ ಪೊಲೀಸರಿಗೆ ದೂರು‌ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಅಸಲಿ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: ಮೈಲಾರ ಕಾರ್ಣಿಕ : 'ಮಳೆ ಬೆಳೆ ಜಾಸ್ತಿ ಆಗಲಿದ್ದು, ರೈತರಿಗೆ ಒಳ್ಳೆಯದಾಗಲಿದೆ'

ಮೃತ ವ್ಯಕ್ತಿ ಹಾಗೂ ಆರೋಪಿಗಳೆಲ್ಲರೂ ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆ. ಕಾಡುಗೋಡಿಯ ಬೀಸನಹಳ್ಳಿಯಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಚಿಂದಿ ಆಯುವ ಕೆಲಸ‌ ಮಾಡಿಕೊಂಡಿದ್ದ ಮೊಹಮ್ಮದ್ ರಂಜಾನ್ ಬಳಿ ಮೃತ ರಸೂಲ್‌ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ಸಂಬಳ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು.

ಊರಿನಲ್ಲಿರುವ ಹೆಂಡತಿಗೆ ಹಣ ಕಳುಹಿಸದ ಕಾರಣ ರಸೂಲ್ ನೊಂದುಕೊಂಡಿದ್ದ. ಹೀಗಾಗಿ ವೇತನ ನೀಡುವಂತೆ ರಂಜಾನ್‍ಗೆ ಒತ್ತಾಯಿಸಿದ್ದ. ಇದೇ ವಿಷಯವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಇದರಿಂದ ಬೇಸತ್ತಿದ್ದ ರಸೂಲ್ ಜ.14ರಂದು ತಾನೂ ಧರಿಸಿದ್ದ ಲುಂಗಿಯಲ್ಲೇ ನೇಣು ಬಿಗಿದುಕೊಂಡಿದ್ದ. ಈ ವಿಷಯ ಅರಿತ ಆರೋಪಿಗಳು ಸಹಜ ಸಾವು ಎಂಬಂತೆ ಬಿಂಬಿಸಿ ಅಂತ್ಯಸಂಸ್ಕಾರ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ನ್ಯಾಯಾಲಯದ ಅನುಮತಿ ಪಡೆದು ಕೆ.ಆರ್.ಪುರಂ ತಹಶೀಲ್ದಾರ್ ನೇತೃತ್ವದಲ್ಲಿ ಶವ ಹೂತಿದ್ದ ಜಾಗಕ್ಕೆ ತೆರಳಿ ಮೃತ ರಸೂಲ್‌ ನ ಕಳೇಬರವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 306ನಂತೆ ಕಿರುಕುಳ ತಾಳಲಾರದೆ ಆತ್ಮಹತ್ಯೆ‌‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Aero India 2023 : ಏರೋ ಇಂಡಿಯಾ 2023 ರ ಭವ್ಯತೆಗೆ ಸಾಕ್ಷಿ : ಇಲ್ಲಿದೆ ಈ ಭಾರಿಯ ವಿಶೇಷತೆಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News