ಮೇಕೆದಾಟು ಪಾದಯಾತ್ರೆ: ಪ್ರಯಾಣಿಕರ ಪರದಾಟ, ಅವಾಚ್ಯ ಶಬ್ದ ಬಳಸಿ ಸಾರ್ವಜನಿಕರ ಆಕ್ರೋಶ

ಮೇಕೆದಾಟು ಪಾದಯಾತ್ರೆ(Mekedatu Padayatra) 2.0’ಗಾಗಿ ಮಂಡ್ಯದಿಂದ ಬೆಂಗಳೂರಿಗೆ ಹೊರಡಲು ಬದಲಿ ಮಾರ್ಗ ಮಾಡಿದ್ದು, ಮಂಡ್ಯದ ಮದ್ದೂರು ಬಳಿ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Feb 27, 2022, 10:26 AM IST
  • ರಾಮನಗರದಿಂದ ಮತ್ತೆ ಮೇಕೆದಾಟು ಪಾದಯಾತ್ರೆ 2.0ಗೆ ಚಾಲನೆ ನೀಡಲಾಗಿದೆ
  • ಪಾದಯಾತ್ರೆಯ ಮಾರ್ಗ ಬದಲಿಸಿದ್ದಕ್ಕೆ ರಾಜಕಾರಣಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
  • ನಡುರಸ್ತೆಯಲ್ಲಿಯೇ ನಿಂತುಕೊಂಡು ಪೊಲೀಸ್ ಸಿಬ್ಬಂದಿ ಜೊತೆಗೆ ಸಾರ್ವಜನಿಕರ ವಾಗ್ವಾದ
ಮೇಕೆದಾಟು ಪಾದಯಾತ್ರೆ: ಪ್ರಯಾಣಿಕರ ಪರದಾಟ, ಅವಾಚ್ಯ ಶಬ್ದ ಬಳಸಿ ಸಾರ್ವಜನಿಕರ ಆಕ್ರೋಶ    title=
ಮೇಕೆದಾಟು ಪಾದಯಾತ್ರೆ 2.0ಗೆ ಚಾಲನೆ

ಮಂಡ್ಯ: ಮೇಕೆದಾಟು ಯೋಜನೆ(Mekedatu Project) ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಕಳೆದ ಜನವರಿ 9ರಂದ ಶುರುವಾಗಿತ್ತು. ಕೊರೊನಾ ಸಾಂಕ್ರಾಮಿಕದ ಪರಿಣಾಮ ಕೋರ್ಟ್ ಸೂಚನೆ ಮೇರೆಗೆ ಕಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಯನ್ನು ರಾಮನಗರದಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಇದೀಗ ಅದೇ ಸ್ಥಳದಿಂದ ಕಾಂಗ್ರೆಸ್ ನಾಯಕರು ‘ಮೇಕೆದಾಟು ಪಾದಯಾತ್ರೆ 2.0’ಗೆ ಚಾಲನೆ ನೀಡುತ್ತಿದ್ದಾರೆ.

ಇಂದಿನಿಂದ ಮತ್ತೆ ಪ್ರಾರಂಭಗೊಳ್ಳುವ ಮೇಕೆದಾಟು 2ನೇ ಹಂತದ ಪಾದಯಾತ್ರೆ(Mekedatu Padayatra) ಅಂತಿಮವಾಗಿ ಮಾರ್ಚ್ 3ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪಲಿದೆ. ಪಾದಯಾತ್ರೆಗೆ ಕಾಂಗ್ರೆಸ್ ನಾಯಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ಸರ್ಕಾರ(BJP Government) ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ತಮ್ಮ ಸರ್ಕಾರವಿದ್ದಾಗ ಯೋಜನೆಯನ್ನು ಏಕೆ ಜಾರಿ ಮಾಡಿಲ್ಲವೆಂದು ಬಿಜೆಪಿ ತಿರುಗೇಟು ನೀಡಿದೆ.

ಇದನ್ನೂ ಓದಿ: 'ಬಿಜೆಪಿ ಸರ್ಕಾರ ಬರೀ ಕಾರ್ಪೊರೇಟ್ ಕಂಪನಿಗಳ ಪರ ಇದೆ'- ಸಿದ್ಧರಾಮಯ್ಯ

ಮಾರ್ಗ ಬದಲಾವಣೆಗೆ ಸಾರ್ವಜನಿಕರ ಆಕ್ರೋಶ

‘ಮೇಕೆದಾಟು ಪಾದಯಾತ್ರೆ(Mekedatu Padayatra) 2.0’ಗಾಗಿ ಮಂಡ್ಯದಿಂದ ಬೆಂಗಳೂರಿಗೆ ಹೊರಡಲು ಬದಲಿ ಮಾರ್ಗ ಮಾಡಿದ್ದು, ಮಂಡ್ಯದ ಮದ್ದೂರು ಬಳಿ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಬದಲಿ ಮಾರ್ಗದಲ್ಲಿ ಹೋದರೆ ಸಮಯ ವ್ಯರ್ಥವಾಗುತ್ತೆ, ಸಮಸ್ಯೆಯಾಗುತ್ತೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದು, ಯಾವ್ನೋ ಮಾಡ್ತಾನೆ ಅಂತಾ ಜನರಿಗೆ ಯಾಕ್ರಿ ತೊಂದರೆ ಕೊಡ್ತೀರಾ ಎಂದು ಪ್ರಯಾಣಿಕನೊಬ್ಬ ಅವಾಚ್ಯ ಶಬ್ದಗಳನ್ನು ಬಳಿಸಿ ಪೊಲೀಸರಿಗೆ ಪ್ರಶ್ನಿಸಿದ್ದಾನೆ.  

ಮೇಕೆದಾಟು ಪಾದಯಾತ್ರೆಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್(Police) ವಿವರಿಸಿದಾಗ, ಪರ್ಯಾಯ ಮಾರ್ಗದಲ್ಲಿ ಹೋದರೆ ತುಂಬಾ ಸಮಯ ಬೇಕು, ಆಸ್ಪತ್ರೆಗೆ ಹೋಗ್ತಿದ್ದೀವಿ, ಏನಾದ್ರೂ ಸಾವು ಆದ್ರೆ ಯಾರು ಹೊಣೆ ಎಂದು ಪೊಲೀಸರಿಗೆ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಮಜಾಯಿಸಿ ನೀಡಿದ ಪೊಲೀಸ್ ಸಿಬ್ಬಂದಿ, ‘ನೀವೇ ತಾನೇ ಆರಿಸಿ ಕಳಿಸಿದ್ದೀರಿ, ನಾವೇನ್ ಮಾಡೋಣ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: 80ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್.ಯಡಿಯೂರಪ್ಪ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಶುಭಾಶಯ

ಪಾದಯಾತ್ರೆಯಲ್ಲಿ ಯಾವುದೇ ರಾಜಕಾರಣವಿಲ್ಲ

ಮೇಕೆದಾಟು ಪಾದಯಾತ್ರೆ 2.0ಗೆ ಇಂದಿನಿಂದ ಚಾಲನೆ ದೊರಕಿದ್ದು, ಈ ಪಾದಯಾತ್ರೆಯಲ್ಲಿಯಾವುದೇ ರಾಜಕಾರಣವಿಲ್ಲವೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ಹೇಳಿದ್ದಾರೆ. ತಮಿಳುನಾಡಿನ ನಡೆಗೆ ಕೂಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News