ಸಿದ್ದರಾಮಯ್ಯ ಮತ್ತು ಡಿಕೆಶಿ ಶಾಶ್ವತವಾಗಿ ನಿರುದ್ಯೋಗಿಯಾಗಲಿದ್ದಾರೆ: ಬಿಜೆಪಿ

‘ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದೊಡ್ಡಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪರ ಫಲಿತಾಂಶ ಬಂದಿದೆ, ಇದರಿಂದ ಮುಂದೆ ಡಿಕೆಶಿ ಮತ್ತು ಸಿದ್ದರಾಮಯ್ಯ ಶಾಶ್ವತವಾಗಿ ನಿರುದ್ಯೋಗಿಯಾಗಲಿದ್ದಾರೆ'

Written by - Zee Kannada News Desk | Last Updated : Sep 26, 2021, 11:10 AM IST
  • ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತೇವೆ
  • ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಮುಂದಡಿ ಇಡುತ್ತೇವೆ ಎಂದು ಟೀಕಿಸಿ ಬಿಜೆಪಿ ಟ್ವೀಟ್
  • ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹೃದಯಹೀನವಾಗಿದೆ ಎಂದು ಕುಟುಕಿದ ಕಾಂಗ್ರೆಸ್
ಸಿದ್ದರಾಮಯ್ಯ ಮತ್ತು ಡಿಕೆಶಿ ಶಾಶ್ವತವಾಗಿ ನಿರುದ್ಯೋಗಿಯಾಗಲಿದ್ದಾರೆ: ಬಿಜೆಪಿ  title=
ಕಾಂಗ್ರೆಸ್ ನಾಯಕರ ಟಾಂಗಾ ಸವಾರಿ ಪ್ರತಿಭಟನೆಗೆ ಬಿಜೆಪಿ ಟೀಕೆ (Photo Courtesy: Twitter/@siddaramaiah)

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಶಾಶ್ವತವಾಗಿ ನಿರುದ್ಯೋಗಿಯಾಗಲಿದ್ದಾರೆ ಎಂದು ಬಿಜೆಪಿ ಟೀಕಸಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ಉಲ್ಲೇಖಿಸಿ ಭಾನುವಾರ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ‘ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದೊಡ್ಡಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪರವಾದ ಫಲಿತಾಂಶ ಬಂದಿದೆ. ಇದರಿಂದ ಮುಂದೆ ಡಿಕೆಶಿ ಮತ್ತು ಸಿದ್ದರಾಮಯ್ಯ ಶಾಶ್ವತವಾಗಿ ನಿರುದ್ಯೋಗಿಯಾಗಲಿದ್ದಾರೆ’ ಎಂದು ಕುಟುಕಿದೆ.

‘ರಾಜ್ಯದಲ್ಲಿ ಮುಂದೆ ನಡೆಯಲಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಮುಂದಡಿಯಿಡುತ್ತೇವೆ. ಈ ಇಬ್ಬರು ನಾಯಕರು ಅಧಿಕಾರವಿಲ್ಲದೆ ಕೊನೆಯವರೆಗೂ ಟಾಂಗಾ ಗಾಡಿಯಲ್ಲಿ ನಡೆದಾಡಬೇಕಿದೆ ಎಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್(Congress) ನಾಯಕರು ನಡೆಸಿದ್ದ ಟಾಂಗಾ ಸವಾರಿ ಪ್ರತಿಭಟನೆಗೆ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ  

 ಹೃದಯಹೀನ ಬಿಜೆಪಿ ಸರ್ಕಾರ

ಅತ್ತ ಬಿಜೆಪಿ ಸರ್ಕಾರ(BJP Govt.)ದ ವಿರುದ್ಧ ಚಾಟಿ ಬೀಸಿರುವ ಕರ್ನಾಟಕ ಕಾಂಗ್ರೆಸ್, ‘ರಾಜ್ಯ ಸರ್ಕಾರ ಹೃದಯಹೀನವಾಗಿದೆ’ ಟೀಕಿಸಿದೆ. ಕೊರೊನಾ ಸಾಂಕ್ರಾಮಿಕ, ಲಾಕ್‌ಡೌನ್, ಬೆಲೆ ಏರಿಕೆ, ಅತಿವೃಷ್ಟಿಯಂತಹ ಸವಾಲುಗಳ ನಡುವೆಯೂ ರೈತರು ಬದುಕುವ ಅನಿವಾರ್ಯತೆಯಲ್ಲಿ, ಸಂಕಷ್ಟದಲ್ಲಿಯೇ ಕೃಷಿ ಮುಂದುವರೆಸಿದ್ದಾರೆ. ಈರುಳ್ಳಿ, ಹಸಿಮೆಣಸು ಬೆಳೆಗಳ ಬೆಲೆ ಕುಸಿದು ಬೆಳೆ ಕಟಾವಿನ ಮೊತ್ತವೂ ರೈತರಿಗೆ ಸಿಗದಂತಾಗಿದೆ. ರೈತರ ನೆರವಿಗೆ ಧಾವಿಸದೆ ಕಣ್ಮುಚ್ಚಿ ಕುಳಿತಿದೆ ಹೃದಯಹೀನ ಬಿಜೆಪಿ ಸರ್ಕಾರ’ ಎಂದು ಟ್ವೀಟ್ ಮಾಡಿದೆ.  

ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!

‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದ ಸರ್ಕಾರ ರೈತರ ವಿಚಾರದಲ್ಲಿ  ನಿರ್ಲಕ್ಷ್ಯ, ಉದಾಸೀನತೆ, ನಿದ್ರಾವಸ್ಥೆ 'ಮಂತ್ರ' ಪಾಲಿಸುತ್ತಿದೆ. ಅವರ ನಾಯಕರು ದೆಹಲಿಯಲ್ಲಿ ರೈತರನ್ನು ಹಿಂಸಿಸುತ್ತಿದ್ದು, ಅದನ್ನೇ ಇವರೂ ಅನುಸರಿಸುತ್ತಿದ್ದಾರೆ. ಈರುಳ್ಳಿ ಬೆಳೆಗಾರರ ಸಂಕಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಎಸ್ ಡಿಆರ್‌ಎಫ್ ಮೂಲಕ ಪರಿಹಾರ ನೀಡಿ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News