ಕಾಂಗ್ರೆಸ್‌ನ ಅನ್ವರ್ಥನಾಮವೇ ತ್ಯಾಗ, ಬಲಿದಾನ, ಜೈಲುವಾಸ: ಸಿದ್ದರಾಮಯ್ಯ

ಹೆಡ್ಗೆವಾರ್‌ ಅವರಿಂದ 1925ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್‌ ಯಾವತ್ತಾದರೂ ಒಂದು ದಿನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆ ಇದೆಯಾ? ಸಾವರ್ಕರ್‌ ಒಬ್ಬ ಮಹಾನ್‌ ರಾಷ್ಟ್ರಭಕ್ತ ಎಂದು ಹೇಳುತ್ತಾರೆ, ಸಾವರ್ಕರ್‌ ಬ್ರಿಟೀಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದರು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. 

Written by - Prashobh Devanahalli | Edited by - Chetana Devarmani | Last Updated : Jul 21, 2022, 05:02 PM IST
  • ಆರ್‌ಎಸ್‌ಎಸ್‌ ಯಾವತ್ತಾದರೂ ಒಂದು ದಿನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆ ಇದೆಯಾ?
  • ಸಾವರ್ಕರ್‌ ಬ್ರಿಟೀಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದರು
  • ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿಕೆ
ಕಾಂಗ್ರೆಸ್‌ನ ಅನ್ವರ್ಥನಾಮವೇ ತ್ಯಾಗ, ಬಲಿದಾನ, ಜೈಲುವಾಸ: ಸಿದ್ದರಾಮಯ್ಯ title=
ಸಿದ್ದರಾಮಯ್ಯ

ಬೆಂಗಳೂರು: ಹೆಡ್ಗೆವಾರ್‌ ಅವರಿಂದ 1925ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್‌ ಯಾವತ್ತಾದರೂ ಒಂದು ದಿನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆ ಇದೆಯಾ? ಸಾವರ್ಕರ್‌ ಒಬ್ಬ ಮಹಾನ್‌ ರಾಷ್ಟ್ರಭಕ್ತ ಎಂದು ಹೇಳುತ್ತಾರೆ, ಸಾವರ್ಕರ್‌ ಬ್ರಿಟೀಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದರು. ನರೇಂದ್ರ ಮೋದಿ ಅವರೇ ಇದು ನಿಮ್ಮ ಇತಿಹಾಸ. ಹೀಗಿರುವಾಗ ನಿಮಗೆ ನಾಚಿಕೆ, ಮಾನ ಮರ್ಯಾದಿ ಇದೆಯಾ? ಕಾಂಗ್ರೆಸ್‌ ನ ಅನ್ವರ್ಥನಾಮವೇ ತ್ಯಾಗ, ಬಲಿದಾನ ಮತ್ತು ಜೈಲುವಾಸ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. 

ಬಿಜೆಪಿಯವರು ಜನರ ವಿಶ್ವಾಸ ದ್ರೋಹಿಗಳು :

97 ವರ್ಷಗಳ ಆರ್‌,ಎಸ್‌,ಎಸ್‌ ಇತಿಹಾಸದಲ್ಲಿ ಒಂದು ಮೇಲ್ಜಾತಿಯವರನ್ನು ಬಿಟ್ಟರೆ ಬೇರೆ ಯಾರಾದರೂ ಸರಸಂಘಚಾಲಕರಾಗಿದ್ದಾರಾ? ಹಿಂದುಳಿದ ಜಾತಿಯ, ಅಲ್ಪಸಂಖ್ಯಾತ, ದಲಿತರನ್ನು ಈ ಉನ್ನತ ಹುದ್ದೆಗಳಲ್ಲಿ ಕೂರಿಸಿದ್ದೀರ? ಎಲ್ಲಿದೆ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್? ಬಿಜೆಪಿಯವರು ಜನರ ವಿಶ್ವಾಸ ದ್ರೋಹಿಗಳು. ಇಂಥವರು ದೇಶದ ಆಡಳಿತ ಚುಕ್ಕಾಣಿ ಹಿಡಿದು ಕೂತಿದ್ದಾರೆ. ನೆಹರು ಕುಟುಂಬ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ? ಎಂದು ವಾಗ್ದಾಳಿ ನಡೆಸಿದ್ದಾರೆ. 

ಇದನ್ನೂ ಓದಿ: ಬಿಜೆಪಿ ಸರ್ವಾಧಿಕಾರ, ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

ಸೋನಿಯಾ ಗಾಂಧಿ ಅವರು ಒಂದು ಪೈಸೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರ? 90 ಕೋಟಿ ಹಣ ನೀಡಿದ್ದು ಕಾಂಗ್ರೆಸ್‌ ಪಕ್ಷ. ಆ ಶೇರ್‌ ಗಳು ಕನ್ವರ್ಟ್‌ ಆದಮೇಲೆ ಅದರಲ್ಲಿ ಒಂದು ರೂಪಾಯಿಯನ್ನೂ ಯಾರೂ ಮಟ್ಟುವ ಹಾಗಿಲ್ಲ. ಹಣ ಕಾಂಗ್ರೆಸ್‌ ಪಕ್ಷದ್ದು, ತೆರಿಗೆ ಕಟ್ಟದಿದ್ದರೆ ಅಕ್ರಮ ವರ್ಗಾವಣೆ ಆಗುತ್ತೆ, ಎಲ್ಲಿ ಈ ರೀತಿ ಅಕ್ರಮ ಆಗಿದೆ? ಇದು ಸುಳ್ಳು ಕೇಸ್‌ ಅಲ್ಲವೇ? ಬಿಜೆಪಿಯವರು ಕಾಂಗ್ರೆಸ್‌ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ, ಇದಕ್ಕಾಗಿ ನಮ್ಮ ಪಕ್ಷದ ಎಲ್ಲರೂ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇದನ್ನು ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ತ್ಯಾಗ ಮಾಡುವುದು ಸುಲಭದ ಮಾತಲ್ಲ :

ಸಂಸದೀಯ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಹಿಟ್ಲರ್‌ ಹೇಗೆ ತನ್ನ ವಿರೋಧಿಗಳನ್ನು ಸಂಹಾರ ಮಾಡಿದ ಅದೇ ರೀತಿ ಕೆಳ ಸಮುದಾಯದ ಜನರನ್ನು ದಾಸ್ಯಕ್ಕೆ ತಳ್ಳಿ, ದೇಶದಲ್ಲಿ ದರ್ಬಾರ್‌ ಮಾಡಲು ಹೊರಟಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಈ ಚಳವಳಿ ನಾಳೆಯಿಂದ ಜಿಲ್ಲಾ ಮಟ್ಟದಲ್ಲೂ ನಡೆಯಲಿದೆ, ಇದು ನಿರಂತರವಾಗಬೇಕು. ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತದೆ, ಪ್ರಕರಣಗಳನ್ನು ದಾಖಲಿಸಿ, ಬಿಜೆಪಿ ಸೇರಿಕೋ ನಿನ್ನ ಮೇಲಿರುವ ಎಲ್ಲಾ ಕೇಸ್‌ ಗಳನ್ನು ವಜಾ ಮಾಡುತ್ತೇವೆ ಎಂಬ ಆಮಿಷವನ್ನು ಒಡ್ಡುತ್ತಾರೆ. ಇದೆಲ್ಲ ಸಹಜವಾಗಿ ನಡೆಯಲಿದೆ. ಡಿ.ಕೆ ಶಿವಕುಮಾರ್‌ ಅವರಿಗೆ ಈ ಅನುಭವ ಆಗಿದೆ. ಇದನ್ನೇ ಹಿಟ್ಲರ್‌ ತನ್ನ ಕಾಲದಲ್ಲಿ ಮಾಡುತ್ತಿದ್ದದ್ದು. ಹೀಗಾದರೆ ದೇಶ ಉಳಿಯುತ್ತದಾ? ಇದಕ್ಕಾಗಿಯಾ ಸ್ವಾತಂತ್ರ್ಯ ತಂದುಕೊಟ್ಟದ್ದು, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದು? ಎಂದು ಕಿಡಿಕಾರಿದ್ದಾರೆ.

ಯಾರಾದರೂ ತ್ಯಾಗ ಬಲಿದಾನ ಮಾಡಿದವರಿದ್ದರೆ ಅದು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರು. ಪ್ರಧಾನಿ ಪಟ್ಟವನ್ನು ಯಾರಾದರೂ ಬೇರೆಯವರಿಗೆ ಬಿಟ್ಟುಕೊಡ್ತಾರ? ಈಗಿನ ಕಾಲದಲ್ಲಿ ಪಂಚಾಯತಿಯ ಅಧ್ಯಕ್ಷ ಸ್ಥಾನವನ್ನೇ ಬಿಡಲ್ಲ. ಆದರೆ ಸೋನಿಯಾ ಗಾಂಧಿ ಅವರು ಮನೆಬಾಗಿಲಿಗೆ ಬಂದಿದ್ದ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿ, ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಮಾಡಿದರು. ರಾಹುಲ್‌ ಗಾಂಧಿ ಅವರು ಮನಸು ಮಾಡಿದ್ದರೆ ಪ್ರಧಾನಿಯಾಗಲು ಸಾಧ್ಯವಾಗುತ್ತಿತ್ತು. ಮನಮೋಹನ್‌ ಸಿಂಗ್‌ ಅವರು ಬಿಟ್ಟುಕೊಡಲ್ಲ ಎನ್ನುತ್ತಿದ್ದರಾ? ತ್ಯಾಗ ಮಾಡುವುದು ಸುಲಭದ ಮಾತಲ್ಲ. ಎಲ್ಲರಿಂದಲೂ ಇದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ಬಡವರು ತಿನ್ನುವ ಆಹಾರದ ಮೇಲೆ ತೆರಿಗೆ ಹಾಕಿದ್ದಾರೆ :

ದೇಶಕ್ಕಾಗಿ ಗಾಂಧೀಜಿ, ನೆಹರು, ಜಯಪ್ರಕಾಶ್, ರಾಹುಲ್‌ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ನರೇಂದ್ರ ಮೋದಿ ಅವರನ್ನು ಹೀಗೆಯೇ ಅಧಿಕಾರದಲ್ಲಿ ಮುಂದುವರೆಯಲು ಬಿಟ್ಟರೆ ಈ ದೇಶ ಮುಂದೊಂದು ದಿನ ಇಂದು ಶ್ರೀಲಂಕಾ ಎದುರಿಸುತ್ತಿರುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಬಡವರು ತಿನ್ನುವ ಅಕ್ಕಿ, ಗೋಧಿ, ಹಾಲು, ಮೊಸರು ಇವುಗಳ ಮೇಲೆ ತೆರಿಗೆ ಹಾಕಿದ್ದಾರೆ. ಸರ್ಕಾರ ಸಾಮಾನ್ಯ ಜನರ ರಕ್ತ ಹೀರುತ್ತಿದೆ. ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಕಾರ್ಪೋರೇಟ್‌ ಬಾಡಿಗಳ ಮೇಲಿದ್ದ 30% ತೆರಿಗೆಯನ್ನು ಮೋದಿ ಅವರು ಪ್ರಧಾನಿಯಾದ ಮೇಲೆ 22% ಗೆ ಇಳಿಸಿದ್ದಾರೆ. ನೀವು ಯಾರ ಪರವಾಗಿದ್ದೀರ ಮೋದಿಜೀ? ಅಂಬಾನಿ, ಅದಾನಿ ಪರವಾಗಿಯೋ? ಜನರಿಗೆ ಸುಳ್ಳು ಹೇಳಿ, ಭ್ರಮಾ ಲೋಕವನ್ನು ಸೃಷ್ಟಿ ಮಾಡಿ ಅಧಿಕಾರಕ್ಕೆ ಬಂದು ಬಡವರ ರಕ್ತ ಹೀರುತ್ತಿದ್ದೀರಲ್ಲ ನಿಮಗೆ ನಾಚಿಕೆಯಾಗಲ್ವಾ? ಎಂದು ತಿಳಿಸಿದ್ದಾರೆ. 

ದೇಶದ ಸಾಮಾನ್ಯ ಜನರ ಪರವಾಗಿರುವ ಪಕ್ಷ ಎಂದರೆ ಕಾಂಗ್ರೆಸ್‌ ಮಾತ್ರ. ಬಡವರು, ಶೋಷಿತರಿಗೆ ನ್ಯಾಯ ಕೊಡಿಸಬೇಕಾದರೆ ನರೇಂದ್ರ ಮೋದಿ ಮತ್ತು ರಾಜ್ಯದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು. 2008 ರಲ್ಲಿ ಯಡಿಯೂರಪ್ಪ ಅವರು ಆರಂಭ ಮಾಡಿದ ಆಪರೇಷನ್‌ ಕಮಲ ಇಂದು ಎಲ್ಲಾ ರಾಜ್ಯಗಳಿಗೆ ಹಬ್ಬಿದೆ. ಬಹುಮತ ಪಡೆದು ಗೆದ್ದು ಬಂದ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸಿ, ಸರ್ಕಾರ ಬೀಳಿಸುವುದು ಪ್ರಜಾಪ್ರಭುತ್ವದ ಆಶಯವೇ? ಎಂದು ತಿಳಿಸಿದ್ದಾರೆ. 

ನಮ್ಮ ಈ ಪ್ರತಿಭಟನೆ ನಿರಂತರವಾಗಿ ನಡೆಸಬೇಕು: 

ನಾವು ಅಧಿಕಾರಕ್ಕೆ ಬಂದ ಮೇಲೆ ಪಕ್ಷಾಂತರ ಕಾಯ್ದೆಯನ್ನು ಬಲಪಡಿಸುವ ಕೆಲಸವನ್ನು ಮಾಡುತ್ತೇವೆ ಮತ್ತು ಇಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ತಿದ್ದುಪಡಿ ತರುತ್ತೇವೆ. ಇಲ್ಲದಿದ್ದರೆ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಲ್ಲ. ಸಂವಿಧಾನವನ್ನೂ ತಿದ್ದುಪಡಿ ಮಾಡುತ್ತಿದ್ದರೇನೋ, ಆದರೆ ಸಂಸತ್ತಿನಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಸುಮ್ಮನಿದ್ದಾರೆ. ಒಂದು ವೇಳೆ ಸಂವಿಧಾನದ ಮುಕ್ಕಾಲು ಭಾಗವನ್ನು ಬದಲಾವಣೆ ಮಾಡುವುದಾದರೆ ಅದು ಕೇವಲ ಸಂವಿಧಾನತ್ಮಕ ಸಮಿತಿಯಿಂದ ಮಾತ್ರ ಮಾಡಬೇಕು ಎಂದು ಸಂವಿಧಾನವೇ ಸ್ಪಷ್ಟವಾಗಿ ಹೇಳಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಸರ್ವಾಧಿಕಾರ ಜಾರಿಗೆ ತಂದು, ನಮ್ಮನ್ನು ಗುಲಾಮರನ್ನಾಗಿ ಮಾಡಿರೋರು. ಸಂವಿಧಾನ ಉಳಿದರೆ ಮಾತ್ರ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು ಉಳಿಯಲು ಸಾಧ್ಯ. ಹೀಗಾಗಿ ನಾವು ಹೋರಾಟದ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದಿದ್ದಾರೆ. 

ಇದನ್ನೂ ಓದಿ: 'ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇದನ್ನು ಬಿಜೆಪಿ ಸಹಿಸುವುದುದಿಲ್ಲ'

ನಮ್ಮ ಈ ಪ್ರತಿಭಟನೆ ನಿರಂತರವಾಗಿ ನಡೆಸಬೇಕು. ಈ ಮನುವಾದಿ ಜನರು ಸುಮ್ಮನಿರೋರಲ್ಲ, ದೇಶವನ್ನು ಹಾಳು ಮಾಡುವವರು. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ರೆ ಪಕ್ಷದ ಕಾರ್ಯಕರ್ತರು ಹೆದರುತ್ತಾರೆ ಎಂದು ಅಂದುಕೊಂಡಿದ್ದಾರೆ. ಇದೊಂದು ಸುಳ್ಳು ಪ್ರಕರಣ, ಹಾಗಾಗಿ ಇದರಿಂದ ಏನೂ ಮಾಡಲಾಗಲ್ಲ ಎಂಬುದು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೂ ಗೊತ್ತಿದೆ. ನಮ್ಮ ಕಾರ್ಯಕರ್ತರು ಯಾರೂ ಭಯ ಪಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್‌ ಪಕ್ಷ ಬ್ರಿಟೀಷರ ಕೋವಿಗಳಿಗೆ ಧೈರ್ಯದಿಂದ ಎದೆಕೊಟ್ಟು ನಿಂತ ಪಕ್ಷ, ನಿಮ್ಮ ಈ ಷಡ್ಯಂತ್ರಗಳಿಗೆ ಹೆದರುವವರು ನಾವಲ್ಲ ಎಂಬುದನ್ನು ನರೇಂದ್ರ ಮೋದಿ ಅವರಿಗೆ ತಿಳಿಸಲು ಬಯಸುತ್ತೇನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News