ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಆಯೋಜಿಸಿರುವ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ರಾಜಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಮೇ12 ರಂದು ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ 6.5 ಕೋಟಿ ಜನರ ಭವಿಷ್ಯ ಅಡಗಿದೆ ಎಂದರು.
ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿದಂತೆ ಅನೇಕ ಮುಖಂಡರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರವಾಸ ಹೊರಟಿದ್ದಾರೆ. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ರೈತರ ಬಗ್ಗೆ, ನೀರಾವರಿ, ಉದ್ಯೋಗ ಸೃಷ್ಠಿ ಬಗ್ಗೆ ಮಾತನಾಡುತ್ತಿಲ್ಲ. ಎರಡೂ ಪಕ್ಷಗಳು ಕೆಸರೆರಚಾಟದಲ್ಲಿ ತೊಡಗಿವೆ. ಬೇರೆ ಪಕ್ಷದವರನ್ನು ಬೈದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತಾ? ಸಮಸ್ಯೆ ಬಗೆಹರಿಯುತ್ತೆ ಅಂದ್ರೆ ನಾನೂ ಎರಡು ಗಂಟೆ ಸತತವಾಗಿ ಬೈಯಬಲ್ಲೇ ಎಂದು ಆಕ್ರೋಶದ ನುಡಿಗಳನ್ನಾಡಿದ ಹೆಚ್ಡಿಕೆ ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಡಿ ಅಂತ ಬೇಡಿಕೊಳ್ತಾ ಇದ್ದೀನಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಕಳೆದ ನಾಲ್ಕು ವರ್ಷಗಳಿಂದ ರೈತರು ಸಂಕಷ್ಟ ಅನುಭವಿಸಿದ್ದಾರೆ. ರಾಜ್ಯದಲ್ಲಿ ರೈತರು ಅನುಭವಿಸಿರುವ ನಷ್ಟ 58 ಸಾವಿರ ಕೋಟಿ. ಇಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟವಾದಾಗ ಬದುಕುವುದಾದರೂ ಹೇಗೆ ಎಂದ ಹೆಚ್ಡಿಕೆ, ಸಾಲ ಮನ್ನಾ ಮಾಡ್ತಿವಿ ಅಂತ ಕಳೆದ ಜೂನ್ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು, ರೈತರ ಸಾಲ ಮನ್ನಾಕ್ಕೆ 8160 ಕೋಟಿ ಹಣ ಬಿಡುಗಡೆ ಮಾಡ್ತಿನಿ ಅಂತ ತಿಳಿಸಿದರು. ಆದರೆ ಈ ಆಶ್ವಾಸನೆ ನೀಡಿ 9 ತಿಂಗಳುಗಳು ಉರುಳಿದರೂ ರಾಜ್ಯ ಸರ್ಕಾರ ಸಂಪೂರ್ಣ ಹಣ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹೈದರು.
ತಾವು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದೆ. ಆಗ ಆರ್ಥಿಕ ಸಚಿವರಾಗಿದ್ದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ನಾನು ಅದರ ಹೊಣೆ ಹೋರೋದಿಲ್ಲ ಅಂತ ಹೇಳಿದ್ರು ಎಂದು ಕುಮಾರಸ್ವಾಮಿ ಬಿಜೆಪಿ ಬಗ್ಗೆಯೂ ಆಕ್ರೋಶದ ಮಾತುಗಳನ್ನಾಡಿದರು.