Ramya on Fans War: "ನಟರು ಅಭಿಮಾನಿಗಳಿಗೆ ತಿಳವಳಿಕೆ ಹೇಳಿ" - ನಟಿ ರಮ್ಯಾ ಬೇಸರ

Ramya on Fans War: ಈ ಘಟನೆ ಕುರಿತು ಚಂದನವನದ ಎಲ್ಲ ನಟ ಹಾಗೂ ನಟಿಯರೂ ಪ್ರತಿಕ್ರಿಯಿಸುತ್ತಿದ್ದಾರೆ. ದರ್ಶನ್ ಬೆಂಬಲಕ್ಕೆ ಸ್ಯಾಂಡಲ್‌ವುಡ್‌ ತಾರಾ ಬಳಗ ನಿಂತಿದ್ದಾರೆ. ಇದೀಗ ಈ ಬಗ್ಗೆ ಮೋಹಕ ತಾರೆ ರಮ್ಯಾ ಕೂಡ ಮಾತನಾಡಿದ್ದಾರೆ.

Written by - Chetana Devarmani | Last Updated : Dec 21, 2022, 02:58 PM IST
  • ಸಿನಿರಂಗದಲ್ಲಿ ಫ್ಯಾನ್ಸ್‌ ವಾರ್‌ ಹೊಸದೇನಲ್ಲ
  • ದರ್ಶನ್‌ ಮೇಲೆ ಚಪ್ಪಲಿ ಎಸೆತ ಪ್ರಕರಣ
  • ಅಭಿಮಾನಿಗಳ ನಡತೆ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ
Ramya on Fans War: "ನಟರು ಅಭಿಮಾನಿಗಳಿಗೆ ತಿಳವಳಿಕೆ ಹೇಳಿ" - ನಟಿ ರಮ್ಯಾ ಬೇಸರ  title=
ನಟಿ ರಮ್ಯಾ  

Ramya on Fans War: ಸಿನಿರಂಗದಲ್ಲಿ ಫ್ಯಾನ್ಸ್‌ ವಾರ್‌ ಹೊಸದೇನಲ್ಲ, ಈ ದ್ವೇಷಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಸ್ಟಾರ್‌ಗಳು ಆಗಾಗ್ಗೆ ಹೇಳುತ್ತಿದ್ದರೂ, ಪ್ರಸ್ತುತ ಸನ್ನಿವೇಶವು ಇದಕ್ಕೆ ವಿರುದ್ಧವಾಗಿ ಕಾಣುತ್ತದೆ. ಕಳೆದೆರಡು ತಿಂಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಈ ಫ್ಯಾನ್‌ ವಾರ್‌ ನಡೆಯುತ್ತಿದೆ. ದರ್ಶನ್ ತಮ್ಮ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಹೊಸಪೇಟೆಗೆ ಆಗಮಿಸಿದಾಗ ಎಲ್ಲವೂ ಒಂದು ಹಂತಕ್ಕೆ ಬಂದಿತ್ತು. ದೀರ್ಘಕಾಲದವರೆಗೆ ಹೊಸಪೇಟೆಯನ್ನು ಪುನೀತ್ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. ಅಲ್ಲಿಯೇ ಕ್ರಾಂತಿ ಸಾಂಗ್‌ ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿತ್ತು. ಕಾರ್ಯಕ್ರಮ ಆಯೋಜಿಸುತ್ತಿದ್ದಂತೆಯೇ ಹೊತ್ತಿಕೊಂಡ ಕಿಡಿ, ಇದೀಗ ದೊಡ್ಡ ವಿವಾದಕ್ಕೆ ಗ್ರಾಸವಾಗಿದೆ. 

ದರ್ಶನ್ ಮೇಲೆ ಯಾರೋ ಒಬ್ಬರು ಚಪ್ಪಲಿ ಎಸೆದಿದ್ದಾರೆ. ಕಿಡಿಗೇಡಿಯ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ದರ್ಶನ್ ಅಭಿಮಾನಿಗಳು ಪುನೀತ್ ಅಭಿಮಾನಿಗಳನ್ನು ದೂಷಿಸುತ್ತಿದ್ದಾರೆ. ಈ ಘಟನೆ ಕುರಿತು ಚಂದನವನದ ಎಲ್ಲ ನಟ ಹಾಗೂ ನಟಿಯರೂ ಪ್ರತಿಕ್ರಿಯಿಸುತ್ತಿದ್ದಾರೆ. ದರ್ಶನ್ ಬೆಂಬಲಕ್ಕೆ ಸ್ಯಾಂಡಲ್‌ವುಡ್‌ ತಾರಾ ಬಳಗ ನಿಂತಿದ್ದಾರೆ. ಇದೀಗ ಈ ಬಗ್ಗೆ ಮೋಹಕ ತಾರೆ ರಮ್ಯಾ ಕೂಡ ಮಾತನಾಡಿದ್ದಾರೆ.

ಇದನ್ನೂ ಓದಿ : ಕಾಂತಾರದಲ್ಲಿ ರಿಷಬ್ ಸೇರಿದಂತೆ ಇಡೀ ತಾರಾಗಣ ಪಡೆದ ಸಂಭಾವನೆ ಎಷ್ಟು? ಕೇಳಿದ್ರೆ ಬೆಚ್ಚಿಬೀಳ್ತಿರಾ!

"ಚಿತ್ರರಂಗ ಇಂದು ಈ ಹಂತ ತಲುಪಲು ಪ್ರತಿಯೊಬ್ಬರೂ ತಮ್ಮದೇ ಆದ ಸವಾಲುಗಳನ್ನು ಎದುರಿಸಿದ್ದಾರೆ. ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷ್ಟೇ ಅಲ್ಲ, ಸಂಗೀತ ನಿರ್ದೇಶಕರು, ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು, ಫೈಟ್ ಮಾಸ್ಟರ್‌ಗಳು ಸೇರಿದಂತೆ ಪ್ರತಿಯೊಬ್ಬ ತಂತ್ರಜ್ಞರೂ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿಕೊಂಡೇ ಉನ್ನತ ಸ್ಥಾನಕ್ಕೆ ಏರುತ್ತಾರೆ. ಕೆಲವರ ಕಷ್ಟಗಳು ನಮಗೆ ತಿಳಿದಿರುತ್ತೆ, ಮತ್ತೆ ಕೆಲವರದ್ದು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ, ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ. ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲು ಅಸಾಧ್ಯ" ಎಂದು ರಮ್ಯಾ ಹೇಳಿದ್ದಾರೆ.

 

 

"ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಎಲ್ಲಕ್ಕಿಂತ ಮುಖ್ಯ. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತನ್ನ ಹಾಗೆಯೇ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲಿಸುವ ಪ್ರತಿಭೆಗಳಿಗೆ ಸಹಾಯ ಮಾಡುವುದು ಉತ್ತಮ ನಡವಳಿಕೆಯಾಗಿದೆ. ಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ. ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಎಲ್ಲರೂ ಚಿಂತಿಸುವಂತಾಗಿದೆ. ತಮ್ಮ ಬಣದಲ್ಲಿ ಕಾಣಿಸಿಕೊಳ್ಳದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಕಂಡಲ್ಲಿ ನೋವಾಗುತ್ತದೆ. ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಎಂಬುದನ್ನು ಕಂಡು ಬೇಜಾರಾಗಿದೆ" ಎಂದಿದ್ದಾರೆ.

ಇದನ್ನೂ ಓದಿ : ಸ್ಟಾರ್ ನಟರ ಸಂಗಮಕ್ಕೆ ಸಜ್ಜಾಗಿದೆ ವೇದಿಕೆ! ಶಿವಣ್ಣ, ಉಪ್ಪಿ ಮತ್ತೆ ಒಂದಾಗಿ ನಟಿಸೋದು ಫಿಕ್ಸ್!

"ಅಭಿಮಾನಿ ಸಂಘಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದನ್ನು ಮೊದಲಿನಿಂದಲೂ ನೋಡಿದ್ದೇವೆ. ರಕ್ತದಾನ ಶಿಬಿರ, ಅನ್ನದಾನ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಗಿಡ ನೆಡುವುದು, ಪ್ರಕೃತಿ ಕಾಪಾಡುವುದು, ಬಡವರಿಗೆ ಆಹಾರ ಮತ್ತು ಔಷಧಿ ಹಂಚುವುದು ಮುಂತಾದ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಫ್ಯಾನ್ಸ್‌ ಎಂಬ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನು ಹಾಕಿಕೊಳ್ಳದೆ ಅನಾಮಧೇಯವಾಗಿ ತಮಗೆ ಆಗದವರ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತಾಡುವುದು ವಿಷಾದನೀಯವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

"ಈ ರೀತಿಯ ವರ್ತನೆಯನ್ನು ನಮ್ಮ ನಟರು ಖಂಡಿಸಬೇಕಾಗಿದೆ. ತಮ್ಮ ಅಭಿಮಾನಿಗಳಿಗೆ ತಿಳವಳಿಕೆ ಹೇಳಿ ಅವರನ್ನು ಸುಸಂಸ್ಕೃತರಾಗಿ ಮಾಡುವ ಜವಾಬ್ದಾರಿಯನ್ನು ಅವರು ಹೊರಬೇಕಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲವನ್ನು ನೀಡಬಾರದು. ಕನ್ನಡ ಚಿತ್ರರಂಗ ಇಂದು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. IMDB ಉನ್ನತ 10 ಚಲನಚಿತ್ರಗಳ ಪಟ್ಟಿಯಲ್ಲಿ 3 ಕನ್ನಡ ಸಿನಿಮಾಗಳಿವೆ. ಇದನ್ನು ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನ ಮಾಡೋಣ. ಎಲ್ಲರಿಗೂ ಒಳಿತಾಗಲಿ" ಎಂದು ರಮ್ಯಾ ಸುದೀರ್ಘ ಪತ್ರ ಬರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News