"ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರ ಗ್ರಂಥ"

'ನಮ್ಮಲ್ಲಿ ಒಂದೊಂದು ಧರ್ಮಕ್ಕೂ ಒಂದೊಂದು ಗ್ರಂಥವಿದೆ. ಆದರೆ ನಮ್ಮ ದೇಶದ ಮಹಾಗ್ರಂಥ ಸಂವಿಧಾನ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Written by - Zee Kannada News Desk | Last Updated : Nov 26, 2022, 04:31 PM IST
  • ಈ ದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ. ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ.
  • ನೂರಾರು ಭಾಷೆಗಳಿವೆ. ನಮ್ಮಲ್ಲಿ ತುಳು, ಕೊಂಕಣಿ, ಕೊಡವ, ಕನ್ನಡ ಮಾತನಾಡುತ್ತೇವೆ.
  • ನಮ್ಮ ಆಹಾರ ಪದ್ಧತಿ, ಸಂಸ್ಕೃತಿ ಬೇರೆ, ಬೇರೆ ಇದೆ. ಮಂಗಳೂರಿನ ಮುಸಲ್ಮಾನರು ಉರ್ದು ಬದಲು ಕನ್ನಡವನ್ನೇ ಸ್ಪಷ್ಟವಾಗಿ ಮಾತನಾಡುತ್ತಾರೆ.
 "ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರ ಗ್ರಂಥ" title=

ಬೆಂಗಳೂರು: 'ನಮ್ಮಲ್ಲಿ ಒಂದೊಂದು ಧರ್ಮಕ್ಕೂ ಒಂದೊಂದು ಗ್ರಂಥವಿದೆ. ಆದರೆ ನಮ್ಮ ದೇಶದ ಮಹಾಗ್ರಂಥ ಸಂವಿಧಾನ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;

'ಇಂದು ನಮ್ಮ ದೇಶಕ್ಕೆ ಸಂವಿಧಾನ ಸಿಕ್ಕ ದಿನ. ಹಬ್ಬದ ರೀತಿಯಲ್ಲಿ ಆಚರಿಸುವ ದಿನ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಸಂವಿಧಾನ ಪೀಠಿಕೆ ಓದಿ ಜವಾಬ್ದಾರಿ ಸ್ವೀಕರಿಸಿದೆ.

 ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಕೊಟ್ಟ ಸಂವಿಧಾನದಲ್ಲಿ ನಮಗೆ ಹಕ್ಕು, ಧ್ವನಿ, ಅವಕಾಶ, ರಕ್ಷಣೆ ಅಡಗಿದೆ. 

ಇದನ್ನೂ ಓದಿ : BESCOM : ದುಸ್ಥಿಯಲ್ಲಿದ್ದ 1 ಲಕ್ಷಕ್ಕೂ ಅಧಿಕ ಟ್ರಾನ್ಸ್‌ ಫಾರ್ಮರ್‌ ರಿಪೇರಿ ಮಾಡಿದ ಬೆಸ್ಕಾಂ

ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂದು ನಾನು ಹಲವು ಬಾರಿ ಹೇಳಿದ್ದೇನೆ.

ಈ ದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ. ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ. ನೂರಾರು ಭಾಷೆಗಳಿವೆ. ನಮ್ಮಲ್ಲಿ ತುಳು, ಕೊಂಕಣಿ, ಕೊಡವ, ಕನ್ನಡ ಮಾತನಾಡುತ್ತೇವೆ. ನಮ್ಮ ಆಹಾರ ಪದ್ಧತಿ, ಸಂಸ್ಕೃತಿ ಬೇರೆ, ಬೇರೆ ಇದೆ. ಮಂಗಳೂರಿನ ಮುಸಲ್ಮಾನರು ಉರ್ದು ಬದಲು ಕನ್ನಡವನ್ನೇ ಸ್ಪಷ್ಟವಾಗಿ ಮಾತನಾಡುತ್ತಾರೆ. 

ಇದನ್ನೂ ಓದಿ- ಸುಪ್ರೀಂ ಎದುರು ನಮ್ಮ ವಾದ ಮಂಡಿಸಲು ಸಿದ್ಧತೆ: ಸಿಎಂ ಬೊಮ್ಮಾಯಿ

ಇನ್ನು ಕ್ರೈಸ್ತ ಧರ್ಮದವರಿಂದ ನಮ್ಮ ರಾಜ್ಯದ ಚರ್ಚ್ ಗಳಲ್ಲಿ ಕನ್ನಡದಲ್ಲೇ ಪ್ರಾರ್ಥನೆ ಮಾಡಬೇಕು ಎಂಬ ಹೋರಾಟವೂ ನಡೆಯುತ್ತಿದೆ. ಹೀಗೆ ವಿಭಿನ್ನ ಜಾತಿ, ಧರ್ಮ ಇದ್ದರೂ ಇಂತಹ ಸ್ವಾತಂತ್ರ್ಯ, ಹಕ್ಕು ಕೊಟ್ಟಿದ್ದು ಸಂವಿಧಾನ.

ನಮ್ಮ ಸಂವಿಧಾನ ಎಂದಿಗೂ ನಿಮ್ಮ ಜಾತಿ, ಧರ್ಮ ಬಿಡಿ ಎಂದು ಹೇಳಿಲ್ಲ. ಬದಲಿಗೆ ಸರಿಯಾದ ರೀತಿಯಲ್ಲಿ ನಿಮ್ಮ ಕರ್ತವ್ಯ ಮಾಡಲು ಮಾರ್ಗದರ್ಶನ ನೀಡುತ್ತಿದೆ. 

ಹಿಂದುಗಳಿಗೆ ಭಗವದ್ಗೀತೆ ಧರ್ಮಗ್ರಂಥವಾದರೆ, ಕ್ರೈಸ್ತರಿಗೆ ಬೈಬಲ್, ಮುಸಲ್ಮಾನರಿಗೆ ಕುರಾನ್ ಪವಿತ್ರ ಗ್ರಂಥ. ಹಾಗೆ ಸಿಖ್ಖರು, ಜೈನರು ಸೇರಿದಂತೆ ಎಲ್ಲರಿಗೂ ಧರ್ಮ ಗ್ರಂಥ ಇದೆ. 

ಆದರೆ ಈ ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರ ಗ್ರಂಥವಾಗಿದೆ. ಈ ಗ್ರಂಥ ಕೊಟ್ಟವರು ನಮ್ಮ ನಾಯಕರು. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ತೆಗೆದುಕೊಂಡಿದ್ದು ಸಂವಿಧಾನದ ಹೆಸರಿನಲ್ಲಿ. ಇದರ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ನಿಮಗೆ, ನಮಗೆ ಮಾತನಾಡುವ ಶಕ್ತಿ ಕೊಟ್ಟಿದ್ದೆ ಈ ಸಂವಿಧಾನ. ಆದರೆ ಇದನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ.

ಸಂವಿಧಾನ ತಿರುಚಲು ಏಕರೂಪ ನಾಗರಿಕ ಕಾಯ್ದೆ ಎಂದು ಮಾತನಾಡುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಗೊಂದಲ ಸೃಷ್ಟಿಸಿ, ಜನರ ಭಾವನೆ ಕೆರಳಿಸುತ್ತಿದೆ. ಬಿಜೆಪಿಯವರು ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಪ್ರಭುತ್ವ ಗಣರಾಜ್ಯ -  ಈ ದೇಶದ ಐಕ್ಯತೆ ಸಮಗ್ರತೆ, ಶಾಂತಿಯನ್ನು, ರಕ್ಷಿಸುವ ಪ್ರಯತ್ನ ಮಾಡಿ. 

ನಮ್ಮ ರಾಜ್ಯದ ಒಂದೊಂದು ಭಾಗದಲ್ಲೂ ವಿಭಿನ್ನ ಆಹಾರ ಪದ್ಧತಿ ಇದೆ. ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ದೇವರಿಗೆ ನೈವೇದ್ಯಕ್ಕೆ ಮಾಂಸ ಇಡುತ್ತಾರೆ. ಅದು ಅವರ ಪದ್ಧತಿ. 

ಈ ದೇಶದಲ್ಲಿ ಅವರವರ ಪದ್ಧತಿ ಪಾಲನೆಗೆ ಸಂವಿಧಾನದಲ್ಲಿ ರಕ್ಷಣೆ ಇದೆ. ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಅಲ್ಲಿ ಅದನ್ನು ಬದಲಿಸಲು ಬಿಜೆಪಿಗೆ ಏಕೆ ಸಾಧ್ಯವಿಲ್ಲ? ಕಾರಣ ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ಇದೆ.

ನೀವು ಸಂವಿಧಾನದ ಬದಲಾವಣೆ ಮಾಡದೆ ದೇಶ ಉಳಿಸಿ. 

ನಮ್ಮ ಕಷ್ಟ, ಸುಖ ಹೇಳಿಕೊಂಡು  ದೇವರ ಜತೆ ಭಕ್ತನು ಭಗವಂತನ ಜತೆ ವ್ಯವಹರಿಸುವ ಜಾಗ ದೇವಾಲಯ.  

ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಪ್ರತಿಮೆಯನ್ನು ದೇಶದ ಮೂಲೆ, ಮೂಲೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರತಿಮೆ ಇರುವುದು ಅಂಬೇಡ್ಕರ್ ಅವರದು. ಅವರನ್ನು ದೇವರ ರೀತಿ ಜನ ಕಾಣುತ್ತಿದ್ದಾರೆ.

12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಅವರು ಬೇರೆಯವರ ವಿರುದ್ಧ ದ್ವೇಷ ಸಾಧಿಸಿ ಎಂದು ಹೇಳಿದ್ದಾರಾ? ಇದು ಬಸವಣ್ಣ, ಕುವೆಂಪು, ಶಿಶುನಾಳ ಶರೀಫರ, ಕನಕದಾಸರನ್ನು ಕಂಡ ನಾಡು. ಕುವೆಂಪು ಅವರು ಈ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶ ಕೊಟ್ಟರು. ಎಲ್ಲರೂ ಸಾಮರಸ್ಯದಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಸಂದೇಶ ಇದು.

ನಾವು ಪ್ರಮಾಣ ವಚನ ಸ್ವೀಕಾರದಿಂದ ಎಲ್ಲಾ ಹಂತದಲ್ಲೂ ಸಂವಿಧಾನದ ಚೌಕಟ್ಟನ್ನು ಪಾಲಿಸುತ್ತೇವೆ. ನೋಟಿನಲ್ಲಿ ಹಲವು ಭಾಷೆಗಳಿಗೆ ಆದ್ಯತೆ ನೀಡಲಾಗಿದೆ. ಇದಕ್ಕೆ ಶಕ್ತಿ ಕೊಟ್ಟಿದ್ದು ಸಂವಿಧಾನ. ಇದನ್ನು ರಚಿಸುವಾಗ ಅಂಬೇಡ್ಕರ್ ಅವರು ಇಡೀ ಪ್ರಪಂಚದ ಸಂವಿಧಾನ ಅಧ್ಯಯನ ಮಾಡಿ, ಚರ್ಚೆ ಮಾಡಿದ್ದಾರೆ. ಆಮೂಲಕ ವಿಶ್ವದ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ನಮ್ಮ ಸಂವಿಧಾನವನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ಪ್ರಶಂಸೆ ಮಾಡುತ್ತವೆ.

ಇದನ್ನೂ ಓದಿ : ಟೀಚರ್ ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಾಕ್...!

ಬೇರೆ ದೇಶದವರು ನಮ್ಮ ಅಂಬೇಡ್ಕರ್, ಬಸವಣ್ಣನವರ ಆದರ್ಶ ಮೆಚ್ಚಿ ಅವರ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಅಧ್ಯಯನ ಪೀಠ ಸ್ಥಾಪನೆ ಮಾಡಿದ್ದಾರೆ. 

ನೀವು ನಿಮ್ಮ ಬದುಕಲ್ಲಿ, ಸಂವಿಧಾನ, ಸಮಾನತೆ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. 

ನಾವು ಒಂದೊಂದು ಬಣ್ಣದವರಿದ್ದೇವೆ. ಆದರೆ ನಮ್ಮ ರಕ್ತದ ಬಣ್ಣ ಬೇರೆ ಇದೆಯಾ, ಅಥವಾ ನಮ್ಮ ಬೆವರು ಬೇರೆ ಇದೆಯಾ? ನಾಲಿಗೆ ರುಚಿ ಬೇರೆ ಆಗುತ್ತದೆಯೇ? ಇದು ಮನುಷ್ಯರ ಮೂಲಗುಣಗಳು. 

ನಾನು ಕಾರವಾರಕ್ಕೆ ಹೋದಾಗ ಹಾಲಕ್ಕಿ ಜನಾಂಗದವರನ್ನು ಭೇಟಿ ಮಾಡಿದ್ದೆ. ಅವರ ಜೀವನ ಶೈಲಿಯೇ ಬೇರೆ. ಅವರುಗಳನ್ನು ಎಲ್ಲರ ಜತೆ ಒಟ್ಟಿಗೆ ತೆಗೆದುಕೊಂಡು ಹೋಗುವಂತೆ ಸಂವಿಧಾನ ತಿಳಿಸುತ್ತದೆ.

ಪರಿಶಿಷ್ಟರು, ಶೋಷಿತರಿಗೆ ಧ್ವನಿಯಾಗಿ ರಕ್ಷಣೆ ನೀಡಿ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಈ ದೇಶದಲ್ಲಿ ಶಿಕ್ಷಣ ಸಂಸ್ಥೆ, ಆಣೆಕಟ್ಟು ನಿರ್ಮಾಣ, ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮಾಡಿದ್ದು ಕಾಂಗ್ರೆಸ್. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು.

ಬಿಜೆಪಿಯವರು ಈಗ ಮತ ಕದಿಯಲು ಮುಂದಾಗಿದ್ದಾರೆ.  ಸಂವಿಧಾನ ವಿರುದ್ಧವಾಗಿದ್ದೀರಿ ಎಂದು ಅವರ ವಿರುದ್ಧ ದೂರು ನೀಡಿದ್ದೇವೆ. ನಕಲಿ ನೋಟು ಮುದ್ರಣ ಮಾಡಿದಂತೆ ಸರ್ಕಾರಿ ಅಧಿಕಾರಿಗಳ ನಕಲಿ ಗುರುತಿನ ಚೀಟಿ ಮುದ್ರಣ ಮಾಡಿ ಹಂಚಿದ್ದಾರೆ. ನಾಳೆ ನಕಲಿ ಐಎಎಸ್ ಅಧಿಕಾರಿ ಎಂದು ಹೇಳಬಹುದು. ಹೀಗಾಗಿ ಇದರ ವಿರುದ್ಧ ನಾವೆಲ್ಲರೂ ಜಾಗೃತರಾಗಿ ಕೆಲಸ ಮಾಡಬೇಕು.'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News