SPB Death Anniversary: ಸ್ವರ ಮಾಂತ್ರಿಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಗಲಿ ಇಂದಿಗೆ 2 ವರ್ಷ

2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನೂರಾರು ಸೆಲೆಬ್ರಿಟಿಗಳು, ಲಕ್ಷಾಂತರ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ.

Written by - Puttaraj K Alur | Last Updated : Sep 25, 2022, 10:42 AM IST
  • ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿ ಇಂದಿಗೆ 2 ವರ್ಷ
  • 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನೂರಾರು ಸೆಲೆಬ್ರಿಟಿಗಳು, ಲಕ್ಷಾಂತರ ಅಭಿಮಾನಿಗಳಿಂದ ಗೌರವ ನಮನ
  • 5 ದಶಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಗಾನಗಾರುಡಿಗ ಎಸ್‍ಪಿಬಿ
SPB Death Anniversary: ಸ್ವರ ಮಾಂತ್ರಿಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಗಲಿ ಇಂದಿಗೆ 2 ವರ್ಷ  title=
ಎಸ್.ಪಿ.ಬಾಲಸುಬ್ರಹ್ಮಣ್ಯಂ 2ನೇ ವರ್ಷದ ಪುಣ್ಯತಿಥಿ

ನವದೆಹಲಿ: ಸ್ವರ ಮಾಂತ್ರಿಕ, ಲೆಜೆಂಡರಿ ಹಿನ್ನೆಲೆ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿ ಇಂದಿಗೆ ಭರ್ತಿ 2 ವರ್ಷ. 2020ರ ಸೆಪ್ಟೆಂಬರ್ 25ರಂದು ಇಹಲೋಕ ತ್ಯಜಿಸಿದ ಎಸ್‍ಪಿಬಿ ನಿಧನಕ್ಕೆ ಕರುನಾಡು ಸೇರಿದಂತೆ ಇಡೀ ದೇಶವೇ ಕಂಬನಿ ಮಿಡಿದಿತ್ತು.

5 ದಶಗಳ ವೃತ್ತಿಜೀವನದಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಕೀರ್ತಿ ಗಾನಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರದ್ದು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಲನಚಿತ್ರೋದ್ಯಮಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ಬಾಲಸುಬ್ರಹ್ಮಣ್ಯಂ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಗಾಯಕರಲ್ಲಿ ಒಬ್ಬರಾಗಿದ್ದಾರೆ.

2020ರ ಸೆ.25 ಎಸ್‍ಪಿಬಿಯವರ ಕೋಟ್ಯಂತರ ಅಭಿಮಾನಿಗಳ ಅತ್ಯಂತ ನೋವಿನ ದಿನ. ಕೊರೊನಾದಿಂದ ಚೇತರಿಸಿಕೊಂಡಿದ್ದ ಎಸ್‍ಪಿಬಿ ಅನಾರೋಗ್ಯದ ಕಾರಣ ಚೈನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಸ್​ಪಿಬಿ ಬದುಕಿ ಬರಲಿ ಅಂತಾ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳಿದಿದ್ದರು.

ಇದನ್ನೂ ಓದಿ: Bigg Boss Season 9 : ಬಿಗ್‌ ಹೌಸ್‌ಗೆ ಎಂಟ್ರಿ ಕೊಟ್ಟ ರಿವ್ಯೂ ನವಾಜ್..!

ಸಂಗೀತ ಲೋಕದ ದಿಗ್ಗಜ ಎಸ್‍ಪಿಬಿಯವರ 2ನೇ ವರ್ಷದ ಪುಣ್ಯತಿಥಿಯನ್ನು ಇಂದು(ಸೆ.25) ಆಚರಿಸಲಾಗುತ್ತಿದೆ. ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಮತ್ತು ಅಭಿಮಾನ ಹೊಂದಿದ್ದ ಎಸ್‍ಪಿಬಿಯವರು ‘ಮುಂದಿನ ಜನ್ಮವೇನಾದರೂ ಇದ್ದರೆ ಅದು ಕರುನಾಡಿನಲ್ಲೇ ಹುಟ್ಟುತ್ತೇನೆ. ಇಲ್ಲಿನ ಜನರ ಪ್ರೀತಿಯ ಋಣ ತೀರಿಸುತ್ತೇನೆ’ ಅಂತಾ ಹೇಳಿಕೊಂಡಿದ್ದರು. ಬಾಲಸುಬ್ರಹ್ಮಣ್ಯಂರನ್ನು ಕಳೆದುಕೊಂಡ ನೋವು ಎಂದೂ ಮರೆಯಾಗುವಂಥದ್ದಲ್ಲ. ಭೌತಿಕವಾಗಿ ಎಸ್ಪಿಬಿಯವರು ಇಹಲೋಕ ತ್ಯಜಿಸಿದ್ದರೂ ಅವರ ಹಾಡುಗಳ ಮೂಲಕ ಸದಾ ಜೀವಂತವಾಗಿದ್ದಾರೆ.

2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನೂರಾರು ಸೆಲೆಬ್ರಿಟಿಗಳು, ಲಕ್ಷಾಂತರ ಅಭಿಮಾನಿಗಳು ಅವರಿಗೆ ನಮನ ಸಲ್ಲಿಸುತ್ತಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರು 1966ರಲ್ಲಿ ತೆಲುಗು ಚಲನಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ' ಮೂಲಕ ಹಿನ್ನಲೆ ಗಾಯಕರಾಗಿ ಪಾದಾರ್ಪಣೆ ಮಾಡಿದರು. ನಂತರ ಅವರು ಹಿಂತಿರುಗಿ ನೋಡಲಿಲ್ಲ. ಜೀವನದ ಕೊನೆವರೆಗೂ ಅವರು ಹಿಟ್‍ಗಳ ಮೇಲೆ ಹಿಟ್‍ ಸಾಂಗ್‍ಗಳನ್ನು ನೀಡಿ ಜನರನ್ನು ಮನರಂಜಿಸಿದರು.

ಎಸ್‍ಪಿಬಿಯವರಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯನಕ್ಕೆ 6 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. 2016ರಲ್ಲಿ ನಡೆದ ಭಾರತದ 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಗೆ ಅವರು ಭಾಜನರಾದರು. ಎಸ್‍ಪಿಬಿಯವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ (2001), ಪದ್ಮಭೂಷಣ (2011) ಮತ್ತು 2021ರಲ್ಲಿ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: Bigg Boss Kannada Season 9: ದೊಡ್ಮನೆಗೆ ರಾಯಲ್ ಆಗಿ ಎಂಟ್ರಿ ಕೊಟ್ಟ ಆ 18 ಸ್ಪರ್ಧಿಗಳು ಇವರೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News