"ಮೈಲಾರಿ ಹೊಟೇಲ್ ನಲ್ಲಿ ನನಗೆ ಕರ್ನಾಟಕದ ಸ್ವಾಭಿಮಾನ, ಪರಿಶ್ರಮದ ದರ್ಶನವಾಯಿತು"-ಪ್ರಿಯಾಂಕಾ ಗಾಂಧಿ 

ನಾವು ಸತ್ಯದ ಪರವಾಗಿ ಹೋರಾಟ ಮಾಡುತ್ತಿದ್ದು, ಭಗವಂತನ ಆಶೀರ್ವಾದ ನಮ್ಮ ಮೇಲಿದೆ. ಇನ್ನು ಕರ್ನಾಟಕದ ಚುನಾವಣೆ ಕೂಡ ಸತ್ಯದ ಪರವಾದ ಹೋರಾಟವಾಗಿದೆ. ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ಹೊಟೇಲ್ ಗೆ ಹೋಗಿದ್ದೆ. ಅಲ್ಲಿ ಕರ್ನಾಟಕದ ಸ್ವಾಭಿಮಾನ, ಪರಿಶ್ರಮದ ದರ್ಶನವಾಯಿತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

Written by - Zee Kannada News Desk | Last Updated : Apr 26, 2023, 05:27 PM IST
  • ಸಮಾಜದಲ್ಲಿ ನಾವೆಲ್ಲರೂ ಸೋದರತ್ವದಿಂದ ಬದುಕಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಬೆಳೆಯಬೇಕು.
  • ಇಲ್ಲದಿದ್ದರೆ ಇಡೀ ದೇಶಕ್ಕೆ ನಷ್ಟವಾಗಲಿದೆ. ನಿಮ್ಮ ಅನುಭವ, ವಿವೇಕದ ಮೇಲೆ ನಮಗೆ ನಂಬಿಕೆ ಇದೆ.
  • ನಿಮಗೆ ಸತ್ಯ ತಿಳಿದುಕೊಳ್ಳುವ ಶಕ್ತಿ ಇದೆ. ಅದನ್ನು ಬಳಸಿಕೊಂಡು ದೇಶ ನಿರ್ಮಾಣ ಮಾಡಬೇಕಿದೆ.
"ಮೈಲಾರಿ ಹೊಟೇಲ್ ನಲ್ಲಿ ನನಗೆ ಕರ್ನಾಟಕದ ಸ್ವಾಭಿಮಾನ, ಪರಿಶ್ರಮದ ದರ್ಶನವಾಯಿತು"-ಪ್ರಿಯಾಂಕಾ ಗಾಂಧಿ  title=

ಬೆಂಗಳೂರು: ನಾವು ಸತ್ಯದ ಪರವಾಗಿ ಹೋರಾಟ ಮಾಡುತ್ತಿದ್ದು, ಭಗವಂತನ ಆಶೀರ್ವಾದ ನಮ್ಮ ಮೇಲಿದೆ. ಇನ್ನು ಕರ್ನಾಟಕದ ಚುನಾವಣೆ ಕೂಡ ಸತ್ಯದ ಪರವಾದ ಹೋರಾಟವಾಗಿದೆ. ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ಹೊಟೇಲ್ ಗೆ ಹೋಗಿದ್ದೆ. ಅಲ್ಲಿ ಕರ್ನಾಟಕದ ಸ್ವಾಭಿಮಾನ, ಪರಿಶ್ರಮದ ದರ್ಶನವಾಯಿತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

ಅವರು ಶೃಂಗೇರಿಯಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು

ನಾನು ಶಾರದಾಂಬೆ ದರ್ಶನ ಮಾಡಿಕೊಂಡು ಬಂದಿದ್ದೇನೆ. ಅಲ್ಲಿಗೆ ಹೋಗಿದ್ದಾಗ ಶಂಕರಾಚಾರ್ಯರು ಇಂದಿರಾ ಗಾಂಧಿ ಅವರು ಇಲ್ಲಿ ಚುನಾವಣೆ ಸ್ಪರ್ಧಿಸಿದ್ದರಲ್ಲವೇ ಎಂದು ಕೇಳಿದರು. ನಾನು ಹೌದು, ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದರು ಎಂದು ಹೇಳಿದೆ. ನಾನು ಅವರಿಂದ ನನಗೆ, ನನ್ನ ಸಹೋದರನಿಗೆ ಆಶೀರ್ವಾದ ಮಾಡುವಂತೆ ಕೇಳಿದೆ. ಅವರೂ ಆಶೀರ್ವಾದ ಮಾಡಿದರು. ಆಗ ಅವರು ಹೇಳಿದರು, ಇಲ್ಲಿಗೆ ನಿಮ್ಮ ತಂದೆ, ಇಂದಿರಾ ಗಾಂಧಿ ಅವರು ಆಗಮಿಸಿದ್ದರು. ಅವರು ಇಲ್ಲಿಗೆ ಬಂದಾಗ ಸಂಘರ್ಷದ ಸಮಯ ಎದುರಿಸುತ್ತಿದ್ದರು. 

ಇಂದೂ ಕೂಡ ನನ್ನ ಕುಟುಂಬಕ್ಕೆ ಸಂಘರ್ಷದ ಸಮಯ ಎದುರಾಗಿದೆ.1978-79ರಲ್ಲಿ ಇಂದಿರಾ ಅವರು ಇದೇ ಮೈದಾನಕ್ಕೆ ಬಂದಾಗ ಸಂಘರ್ಷ ಸಮಯ ಎದುರಿಸುತ್ತಿದ್ದರು. ಅಂದು ಕೂಡ ಇದೇ ರೀತಿಯ ಮಳೆ ವಾತಾವರಣವಿತ್ತು. ಇದನ್ನು ನಾವು ದೇವರ ಆಶೀರ್ವಾದ ಎಂದು ಭಾವಿಸುತ್ತೇವೆ. ಮಳೆ ಶುಭ ಸೂಚನೆ. ಈ ವೇದಿಕೆಯಲ್ಲಿ ನಿಮ್ಮ ಮುಂದೆ ನಾನು ಬಂದು ನಿಂತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಇಂದು ನಾನು ನನ್ನ ಕುಟುಂಬದವರ ಪರವಾಗಿ ನಿಮಗೆ ಪೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ.

ಇಂದಿರಾ ಅವರು ಅತ್ಯಂತ ಸವಾಲಿನ ಸಮಯ ಎದುರಿಸುತ್ತಿದ್ದ ಸಮಯದಲ್ಲಿ ಇಡೀ ಚಿಕ್ಕಮಗಳೂರು ಜನತೆ ಅವರ ಬೆನ್ನಿಗೆ ನಿಂತಿತ್ತು. ಅವರ ವಿರುದ್ಧವೂ ಪ್ರಕರಣ ದಾಖಲಿಸಿ, ಅವರನ್ನು ಸಂಸತ್ತಿನಿಂದ ಹೊರಹಾಕಲಾಗಿತ್ತು. ನೀವು ಅವರನ್ನು ಮತ್ತೆ ಲೋಕಸಭೆಗೆ ಕಳುಹಿಸಿಕೊಟ್ಟಿರಿ. ನೀವು ಅವರಿಗೆ ಆತ್ಮವಿಶ್ವಾಸ ತುಂಬಿ, ಹೋರಾಟ ಮಾಡಲು ಉತ್ತೇಜನ ನೀಡಿದರು. ಇಂದು ಅವರ ಮೊಮ್ಮಗ ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಲೋಕಸಭೆಯಿಂದ ಹೊರಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಜನ ನಮ್ಮ ಜತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ. 

ನಾವು ಸತ್ಯದ ಪರವಾಗಿ ಹೋರಾಟ ಮಾಡುತ್ತಿದ್ದು, ಭಗವಂತನ ಆಶೀರ್ವಾದ ನಮ್ಮ ಮೇಲಿದೆ. ಇನ್ನು ಕರ್ನಾಟಕದ ಚುನಾವಣೆ ಕೂಡ ಸತ್ಯದ ಪರವಾದ ಹೋರಾಟವಾಗಿದೆ. ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ಹೊಟೇಲ್ ಗೆ ಹೋಗಿದ್ದೆ. ಅಲ್ಲಿ ಕರ್ನಾಟಕದ ಸ್ವಾಭಿಮಾನ, ಪರಿಶ್ರಮದ ದರ್ಶನವಾಯಿತು. ಆ ಹೊಟೇಲ್ ನವರು ನನಗೆ ಹೇಳಿದರು, ಅವರ ತಂದೆ ಈ ಹೊಟೇಲ್ ಆರಂಭಿಸಿದ್ದು, ನನಗೂ ದೋಸೆ ಮಾಡುವುದನ್ನು ಹೇಳಿಕೊಟ್ಟರು. ಅದೇ ಸಮಯದಲ್ಲಿ ಅವರ ಮಗಳು ಕೂಡ ಹೊಟೇಲ್ ಗೆ ಬಂದಿದ್ದಳು. ಆಗ ನಾನು ಆಕೆಗೆ ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿದ. ಅದಕ್ಕೆ ಅವರು ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ನನಗೆ ಬಹಳ ಹೆಮ್ಮೆ ಎನಿಸಿತು, ಇದು ನಿಜವಾದ ಕರ್ನಾಟಕ ಎನಿಸಿತು. ಪರಿಶ್ರಮ, ಪ್ರಾಮಾಣಿಕತೆಯಿಂದ ನಮ್ಮ ಪರಂಪರೆ ಮುಂದುವರಿಸುತ್ತಾ, ತಮ್ಮ ಸಂಸ್ಕೃತಿ, ಸಭ್ಯತೆ ಉಳಿಸಿ ಬೆಳೆಸಿಕೊಂಡು ಭವಿಷ್ಯದ ಕಡೆ ನೋಡುವುದು ಕರ್ನಾಟಕ. 

ಇದನ್ನೂ ಓದಿ: Karnataka Election 2023 : ಜಗಳೂರಿನಲ್ಲಿ ಬಾದ್ ಶಾ ಸುದೀಪ್ ಭರ್ಜರಿ ರೋಡ್ ಶೋ, ಬಿಜೆಪಿ ಪರ ಮತಬೇಟೆ

ನಿಮ್ಮ ನಾಡಿನಲ್ಲಿ ಬಂದಿರುವುದಕ್ಕೆ, ನಿಮ್ಮ ಶ್ರಮ, ಪ್ರಾಮಾಣಿಕತೆ ಬಗ್ಗೆ ನನಗೆ ಹೆಮ್ಮೆ ಇದೆ. ಇದೇ ಸಮಯದಲ್ಲಿ ನನಗೆ ಕೆಲವು ವಿಚಾರವಾಗಿ ಬೇಸರವೂ ಇದೆ. ನೀವು ಮತ ಚಲಾಯಿಸುವಾಗ ಬಹಳ ವಿಶ್ವಾಸದಿಂದ ಮತ ಚಲಾಯಿಸುತ್ತೀರಿ. ನನ್ನ ಅಜ್ಜಿ ಮೇಲೆ ನೀವು ಇಟ್ಟ ವಿಶ್ವಾಸವನ್ನು ಅವರು ಉಳಿಸಿಕೊಂಡಿರುವ ಪರಿಣಾಮವಾಗಿ ನೀವು ಇಂದು ನನ್ನನ್ನು ಗುರುತಿಸುತ್ತಿದ್ದೀರಿ.  ಆದರೆ ಕಳೆದ ಮೂರುವರೆ ವರ್ಷಗಳಿಂದ ರಾಜ್ಯದಲ್ಲಿರುವ ಸರ್ಕಾರ ಎಲ್ಲಾ ಹಂತಗಳಲ್ಲಿ ನಿಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಆರಂಭದಲ್ಲಿ ದುರಾಸೆ ಆಧಾರದ ಮೇಲೆ ಶಾಸಕರುಗಳನ್ನು ಹಣ ಕೊಟ್ಟು ಖರೀದಿ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿ ಸರ್ಕಾರ ರಚನೆ ಮಾಡಿದರು. ಅಲ್ಲಿಂದ ಇಲ್ಲಿಯವೆರೂ ಅವರು ಪ್ರತಿ ಮಾತನ್ನೂ ತಪ್ಪಿದ್ದಾರೆ. 

ಯುವಕರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು, ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು, ಮಹಿಳೆಯರಿಗೆ ಬೆಲೆ ಇಳಿಸುವುದಾಗಿ ಹೇಳಿದ್ದರು. ಆದರೆ ಏನಾಯ್ತು? ಇಲ್ಲಿರುವ ಯುವಕರಲ್ಲಿ ಎಷ್ಟು ಉದ್ಯೋಗ ಸಿಕ್ಕಿದೆ? ಸರ್ಕಾರದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ. ಆದರೆ ಆ ಉದ್ಯೋಗ ನಿಮಗೆ ಸಿಗುತ್ತಿಲ್ಲ. ಈ ಸರ್ಕಾರ ಎಲ್ಲಾ ಹುದ್ದೆಗಳಿಗೆ ಬೆಲೆ ನಿಗದಿಯಾಗಿದೆ. ಪ್ರತಿ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. 40% ಕಮಿಷನ್ ಗೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗದಾರರ ಸಂಘ, ರುಪ್ಸಾ ಸಂಸ್ಥೆ ಈ ಸರ್ಕಾರದ 40% ಕಮಿಷನ್ ವಿಚಾರವಾಗಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಶಾಸಕನ ಪುತ್ರ ಭ್ರಷ್ಟಾಚಾರ ಮಾಡುವಾಗ 8 ಕೋಟಿ ಹಣದ ಸಮೇತ ಸಿಕ್ಕಿಬೀಳುತ್ತಾರೆ. ಆದರೂ ಯಾವುದೇ ಕ್ರಮ ಜರುಗಿಸುವುದಿಲ್ಲ. ಬದಲಿಗೆ ಅವರ ತಂದೆ ಮೆರವಣಿಗೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಾವು ಏನು ಬೇಕಾದರೂ ಮಾಡಬಹುದು, ಯಾರು ನಮ್ಮನ್ನು ಕೇಳುವವರಿಲ್ಲ ಎಂಬ ಮನಸ್ಥಿತಿಗೆ ಬಿಜೆಪಿಯವರು ಬಂದಿದ್ದಾರೆ. 

ಕೋವಿಡ್ ಸಮಯದಲ್ಲಿ ಲೂಟಿ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಹಣ ಮಾಡಿದ್ದಾರೆ. ಈ ಸರ್ಕಾರ ಯಾರನ್ನೂ ಬಿಡದೆ ಲೂಟಿ ಮಾಡಿದ್ದಾರೆ. ಇಲ್ಲಿರುವ ಮಹಿಳೆಯರು ಜಮೀನಿನಲ್ಲಿ, ಮನೆಯಲ್ಲಿ ಕೆಲಸ ಮಾಡಿ ಶ್ರಮವಹಿಸುತ್ತಿದ್ದಾರೆ. ನಿಮ್ಮ ಸಂಕಷ್ಟದಿಂದ ಕೂಡಿದೆ. ನೀವು ಈ ಪರಿಶ್ರಮ ಯಾವುದಕ್ಕಾಗಿ ಪರಿಶ್ರಮ ಹಾಕುತ್ತೀರಿ? ನಿಮ್ಮ ಭವಿಷ್ಯ, ನಿಮ್ಮ ಮಕ್ಕಳ ಭವಿಷ್ಯ ಭದ್ರಪಡಿಸಲು ಅಲ್ಲವೇ? ಮಕ್ಕಳ ಆರೋಗ್ಯ ಕೆಟ್ಟರೆ ಹೆದರಿಕೆ, ನೋವಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಉತ್ತಮ ಶಾಲೆಗಳು ಸಿಗದಿದ್ದಾಗ ನಮಗೆ ಬೇಸರವಾಗುತ್ತದೆ. ಇಷ್ಟೆಲ್ಲಾ ಪರಿಶ್ರಮಕ್ಕೆ ತಕ್ಕ ಫಲ ನೀಡದಿದ್ದರೆ, ನಿಮಗೆ ಸಹಜವಾಗಿ ಸರ್ಕಾರದ ವಿರುದ್ಧ ಸಿಟ್ಟು ಬರುತ್ತದೆ. ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕರೆ ಬಹಳ ಸಂತೋಷವಾಗುತ್ತದೆ. ಮಗನಾಗಲಿ, ಮಗಳಾಗಲಿ, ಸ್ವಂತ ಕಾಲಿನಲ್ಲಿ ನಿಲ್ಲಲಿ, ಉತ್ತಮ ಕೆಲಸ ಸಿಗಲಿ ಎಂದು ನಾವೆಲ್ಲರೂ ಬಯಸುತ್ತೇವೆ. ಇದಕ್ಕಾಗಿ ನಾವು ಪರಿಶ್ರಮ ಪಡುತ್ತೇವೆ ಅಲ್ಲವೇ? ಇದೇ ನಮ್ಮ ಹೆಮ್ಮೆ, ಸ್ವಾಭಿಮಾನ ಅಲ್ಲವೇ? ಈ ವಿಚಾರದಲ್ಲಿ ಸರ್ಕಾರದ ಪಾತ್ರ ದೊಡ್ಡದಾಗಿದೆ. ನಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸರ್ಕಾರದ ಕರ್ತವ್ಯವೂ ಇದೆ. ಜನಸಾಮಾನ್ಯರ ಸಂಕಷ್ಟ ಆಲಿಸುವುದು ಸರ್ಕಾರದ ಜವಾಬ್ದಾರಿ. ನಿಮ್ಮ ಅಗತ್ಯಳೇನು ಎಂದು ಕೇಳಬೇಕು, ಹೃದಯಪೂರ್ವಕವಾಗಿ ಕೆಲಸ ಮಾಡುವುದು ಸರ್ಕಾರದ ಜವಾಬ್ದಾರಿ.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಎಷ್ಟು ಹಣ ಲೂಟಿ ಮಾಡಿದ್ದಾರೆ ಗೊತ್ತಾ? ಉದ್ಯೋಗ, ಶಾಲೆ, ಆಸ್ಪತ್ರೆ, ರಸ್ತೆ ವಿಚಾರಗಳನ್ನು ಬಿಡಿ, ಆದರೂ 1.50 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ. ಇಲ್ಲಿ ಅಡಿಕೆ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ನಿಮ್ಮ ಸಾಲವನ್ನು ಮನ್ನಾ ಮಾಡುವುದಿಲ್ಲ. ನಿಮ್ಮ ಮೇಲೆ ಜಿಎಸ್ ಟಿ ಹಕುತ್ತಿದ್ದಾರೆ. ನೀವು ಗ್ಯಾಸ್ ಸಿಲಿಂಡರ್ ಗೆ, ಅಡುಗೆ ಅನಿಲ, ದಿನಸಿ ಪದಾರ್ಥಗಳಿಗೆ ಎಷ್ಟು ಹಣ ನೀಡುತ್ತಿದ್ದೀರಿ ಯೋಚಿಸಿ. ಮತ್ತೊಂದೆಡೆ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಹಣ ಹಂತಹಂತವಾಗಿ ಕಡಿಮೆಯಾಗುತ್ತಿದೆ.  ಇವರು ಲೂಟಿ ಮಾಡಿರುವ 1.50 ಲಕ್ಷ ಕೋಟಿ ಎಲ್ಲಿ ಹೋಯಿತು? ಇದರಲ್ಲಿ 100 ಏಮ್ಸ್ ಆಸ್ಪತ್ರೆ, 2250 ಎಕ್ಸ್ ಪ್ರೆಸ್ ವೇ ಮಾಡಬಹುದಾಗಿತ್ತು. 187 ಇಎಸ್ಐ ಆಸ್ಪತ್ರೆ ನಿರ್ಮಾಣ ಮಾಡಬಹುದಿತ್ತು, ನಮ್ಮ ಮಕ್ಕಳಿಗೆ 30 ಸಾವಿರ ಸ್ಮಾರ್ಟ್ ತರಗತಿ ನಿರ್ಮಿಸಬಹುದಿತ್ತು. ಬೆಂಗಳೂರು ಮೆಟ್ರೋ ಮಾದರಿಯಲ್ಲಿ 750 ಕಿ.ಮೀ ಮೆಟ್ರೋ ಮಾರ್ಗ ನಿರ್ಮಿಸಬಹುದಿತ್ತು. 

ರಾಜ್ಯದ ಬಡವರಿಗೆ 30 ಲಕ್ಷ ಮನೆ ನಿರ್ಮಾಣ ಮಾಡಬಹುದಾಗಿತ್ತು. ಇದು ಬಿಜೆಪಿಯ ಭ್ರಷ್ಟಾಚಾರದ ಸ್ವರೂಪ. ಈ ಸರ್ಕಾರ ನಿಮಗೆ ಏನೂ ಮಾಡಿಲ್ಲ, ನಿಮಗೆ ಸಾಲ, ಸರಿಯಾದ ಬೆಲೆ ಇಲ್ಲ. ಪ್ರಧಾನಿ ಮೋದಿ ಅವರು ತಮ್ಮ ಸ್ನೇಹಿತ ಅದಾನಿ ಅಂಬಾನಿ ಅವರಿಗೆ ಜಿಎಸ್ ಟಿ ಮಾಫಿ, ಸಾಲಮನ್ನಾ ಮಾಡಿದ್ದಾರೆ. ಅವರಿಗೆ ನಿತ್ಯ ಸಾವಿರಾರು ಕೋಟಿ ಆದಾಯ ಸಿಗುತ್ತಿದ್ದು, ಅದಾನಿ ಆಸ್ತಿ ಮೌಲ್ಯ 12 ಲಕ್ಷ ಕೋಟಿಗೆ ಏರಿಕೆಯಾಗಿದೆ. ಜನವಿರೋಧಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಪರಿಸ್ಥಿತಿ ಬರುತ್ತದೆ. 

ರಾಜ್ಯದಲ್ಲಿ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಬಿಜೆಪಿ ಕೇಂದ್ರ ನಾಯಕರು ಬಂದು ತಮ್ಮ ಶಾಸಕರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಇವರನ್ನು ಆಯ್ಕೆ ಮಾಡುವುದಕ್ಕಿಂತ ಈ ಪ್ರದೇಶವನ್ನು ಪ್ರಧಾನಿ ಮೋದಿ ಅವರಿಗೆ ಕೊಡಿ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಬಸವಣ್ಣ, ಕುವೆಂಪು, ನಾರಾಯಣ ಗುರುಗಳ ಆಶೀರ್ವಾದ ಪಡೆದಿರುವ ಈ ನೆಲದ ಮಕ್ಕಳು ತಮ್ಮ ಪ್ರದೇಶದ ಆಡಳಿತ ನಡೆಸಲು ಸಾಧ್ಯವಿಲ್ಲವೇ? ಈ ರಾಜ್ಯದ ಹೆಮ್ಮೆಯಾದ ನಂದಿನಿ ಸಹಕಾರಿ ಸಂಸ್ಥೆ ಕಟ್ಟಿರುವುದು ಯಾರು? ನಿಮ್ಮ ಶ್ರಮದಿಂದ ನೀವು ಇದನ್ನು ಕಟ್ಟಿದ್ದೀರಿ. ಮೊದಲು 99 ಲಕ್ಷ ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿತ್ತು. ಆದರೆ ಇಂದು 70 ಲಕ್ಷ ಲವೀಟರ್ ಮಾತ್ರ ಹಾಲು ಉತ್ಪಾದನೆಯಾಗುತ್ತಿದೆ. ಉದ್ದೇಶಪೂರ್ವಕವಾಗಿ ಹಾಲಿನ ಉತ್ಪಾದನೆ ಕಡಿಮೆ ಮಾಡಿದ್ದಾರೆ. ಗುಜರಾತಿನ ಸಹಕಾರಿ ಸಂಸ್ಥೆ ಅಮೂಲ ಅನ್ನು ರಾಜ್ಯಕ್ಕೆ ಪರಿಚಯಿಸುವ ಷಡ್ಯಂತ್ರ ರೂಪಿಸಿದ್ದಾರೆ. ನಿಮಗೆ ನೆನಪಿದ್ದರೆ, ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚಿನ ಹಾಲು ಉತ್ಪಾದನೆಯಾಗಿ ಶಾಲಾ ಮಕ್ಕಳಿಗೆ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಯನ್ನು ಪರಿಚಯಿಸಲಾಯಿತು. ಕ್ಷೀರಧಾರೆ ಕಾರ್ಯಕ್ರಮದ ಮೂಲಕ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಿಂದ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿತ್ತು. ನಿಮ್ಮ ಹೆಮ್ಮೆಯ ಕರ್ನಾಟಕ ರಾಜ್ಯವನ್ನು ಬಿಜೆಪಿ ಯಾವ ರೀತಿ ಲೂಟಿ ಮಾಡಿದ್ದಾರೆ ಎಂದು ನಿಮಗೆ ಗೊತ್ತಿರಲಿ.

ಬಿಜೆಪಿ ಆಡಳಿತದಲ್ಲಿ ರಾಜ್ಯದ ಸ್ವಾಭಿಮಾನ, ಯುವಕರ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ. ಇದರ ಮೇಲೆ ರಾಜ್ಯ ಲೂಟಿ ಮಾಡಲಾಗುತ್ತಿದೆ. ಮತ್ತೆ ಇಂತಹ ಸರ್ಕಾರ ಬೇಕಾ? ನಿಮ್ಮ ಮುಂದೆ ಬಂದು ನಾಯಕರು ಅವರಿಗೆ ಬೇಕಾದಂತೆ ಸುಳ್ಳು ಹೇಳಿದರೆ, ಅವರನ್ನು ನಾವು ಪ್ರಶ್ನೆ ಮಾಡಬೇಕಲ್ಲವೇ? ನಮ್ಮ ಪ್ರದೇಶದ ಬಗ್ಗೆ ನಮಗೆ ಜವಾಬ್ದಾರಿ ಇಲ್ಲವೇ? ಖಂಡಿತ ಇದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಅನ್ನಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯ, ಕೃಷಿ ಭಾಗ್ಯ, ವಿದ್ಯಾ ಸಿರಿ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಜಾರಿಗೆ ತಂದಿತ್ತು. ಈ ಎಲ್ಲ ಯೋಜನೆಗಳು ಜನಸಾಮಾನ್ಯರ ಅನುಕೂಲಕ್ಕಾಗಿ ಮಾಡಲಾಗಿತ್ತು. ನೆರೆ, ಬರ ಬಂದು ಬೆಳೆಗಳು ನಾಶವಾದರೂ ಬಿಜೆಪಿ ಸರ್ಕಾರ ನಿಮ್ಮ ನೆರವಿಗೆ ಬರುವುದಿಲ್ಲ. ಇಲ್ಲಿನ ಆಣೆಕಟ್ಟು, ನೀರಾವರಿ ಯೋಜನೆ ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ನಮ್ಮ ಸರ್ಕಾರ ಬಂದ ನಂತರ ರೈತರ ಸಾಲ ಮನ್ನಾ ಮಾಡಲಾಗಿತ್ತು. ಛತ್ತೀಸಘಡದಲ್ಲಿ ಅತಿ ಹೆಚ್ಚು ಬೆಂಬಲ ಬೆಲೆ ನೀಡಲಾಗಿದೆ. ಹಿಮಾಚಲದಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದು, ಅದನ್ನು ಜಾರಿಗೊಳಿಸುತ್ತಿದ್ದೇವೆ. ಕರ್ನಾಟಕದಲ್ಲಿ ನಾವು ಕೇವಲ ಮಾತು ನೀಡುತ್ತಿಲ್ಲ. ಗ್ಯಾರಂಟಿ ನೀಡುತ್ತಿದ್ದೇವೆ. ನಾವು ಇಲ್ಲಿ ಶೇ.100 ರಷ್ಟು ಅಭಿವೃದ್ಧಿ ತರುವ ಗ್ಯಾರಂಟಿ ನೀಡುತ್ತಿದ್ದೇವೆ. 2.50 ಲಕ್ಷ ಹುದ್ದೆಗಳ ಭರ್ತಿ ಮಾಡುತ್ತೇವೆ. 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಬಡವರಿಗೆ 10 ಕೆ.ಜಿ ಅಖ್ಕಿ ಉಚಿತವಾಗಿ ನೀಡುತ್ತೇವೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.ನಂದಿನಿ ಸಂಸ್ಥೆಯನ್ನು ಸಧೃಡಗೊಳಿಸುತ್ತೇವೆ. ಬೇರೆ ಸಹಕಾರಿ ಸಂಸ್ಥೆಗಳ ದಾಳಿಯಿಂದ ರಕ್ಷಣೆ ಮಾಡುತ್ತೇವೆ. 

ನಮ್ಮ ಗ್ಯಾರಂಟಿ ಯೋಜನೆಗಳು ಚುನಾವಣೆಗಾಗಿ ಅಲ್ಲ. ಈ ಭಾಗದ ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದಿಂದ ಸಂಕಷ್ಟ ಎದುರಾಗಿದೆ. ನಿಮ್ಮ ಅಡಿಕೆ ತೋಟ ನಾಶವಾಗಿದ್ದರೂ ನಿಮಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ನಮ್ಮ ಸರ್ಕಾರ ನಿಮ್ಮ ಬೆಳೆಗಳಿಗೆ ಸರಿಯಾದ ಬೆಲೆಗಳನ್ನು ನೀಡುತ್ತೇವೆ.

ನಾನು ಚಿಕ್ಕವಳಿದ್ದಾಗ, ನನ್ನ ತಂದೆ ನನ್ನ ಜೊತೆ ಊಟ ಮಾಡುವಾಗ, ಅವರ ಜತೆ ಕೆಲಸ ಮಾಡುವವರೂ ಊಟ ಮಾಡುತ್ತಾ ಬೆಂಗಳೂರನ್ನು ವಿಶ್ವ ಪ್ರಸಿದ್ಧವಾಗಿ ಮಾಡಬಹುದು ಎಂದು ಮಾತನಾಡುತ್ತಿದ್ದರು. ನಾನು ನಮ್ಮ ತಂದೆಯವರನ್ನು ಕೇಳಿದ ಹೇಗೆ ಮಾಡುತ್ತೀರಿ ಎಂದು ಕೇಳಿದೆ. ಅವರು ಅದಕ್ಕೆ ಉತ್ತರಿಸುತ್ತಾ, ಅತಿ ಹೆಚ್ಚು ಇಂಗ್ಲೀಷ್ ಮಾತನಾಡಬಲ್ಲ, ತಂತ್ರಜ್ಞಾನ ಇಂಜಿನಿಯರಿಂಗ್ ಮಾಡಿರುವವರು ಭಾರತದಲ್ಲಿ ಹೆಚ್ಚಾಗಿದ್ದಾರೆ. ಬೆಂಗಳೂರು, ಹೈದರಾಬಾದ್ ನಂತಹ ನಗರಗಳಿಗೆ ಶಕ್ತಿ ತುಂಬಿದರೆ, ಇಡೀ ವಿಶ್ವದ ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡಬಹುದು ಎಂದು ಹೇಳಿದರು. ನಮ್ಮ ತಂದೆ ಕಂಪ್ಯೂಟರ್ ಬಗ್ಗೆ ಮಾತನಾಡಿದಾಗ ವಿರೋಧ ಪಕ್ಷಗಳೆಲ್ಲವೂ ನಮ್ಮ ತಂದೆ ವಿರುದ್ಧ ಧ್ವನಿ ಎತ್ತಿದರು. ನಾನು ಬೆಳೆದ ನಂತರ ನಮ್ಮ ತಂದೆ ಹುತಾತ್ಮರಾದರೂ. ಅದಾದ ಕೆಲವೇ ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿಯಾಗಲಾರಂಭಿಸಿತು. ಬೆಂಗಳೂರು ವಿಶ್ವದಲ್ಲೇ ಸುಪ್ರಸಿದ್ಧವಾಗಿದೆ. 

ಆರು ತಿಂಗಳ ಹಿಂದೆ ನಾನು ನನ್ನ ಮಗಳನ್ನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಬಿಟ್ಟು ಬರಲು ಹೋದಾಗ, ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದಾಗ, ಭಾರತೀಯ ಮೂಲದ ವ್ಯಕ್ತಿ ಬಂದು ನೀವು ಪ್ರಿಯಾಂಕಾ ಅಲ್ಲವೇ ಎಂದು ಕೇಳಿದ. ನಾನು ಹೌದು ಎಂದೆ. ನೀವು ಎಲ್ಲಿಯವರು ಎಂದು ಕೇಳಿದ ಅದಕ್ಕೆ ಬೆಂಗಳೂರಿನವನು ಎಂದರು. ಇಲ್ಲಿ ಏನು ಮಾಡಿಕೊಂಡಿದ್ದೀರಿ ಎಂದು ಕೇಳಿದೆ. ಆಗ ಆತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ನಾವಿಬ್ಬರೂ ಭೇಟಿ ಮಾಡಿ ನಮಗೆ ಹೆಮ್ಮೆಯಾಯಿತು. ಅವರ ಮುಖ್ಯದಲ್ಲಿ ಕರ್ನಾಟಕ ರಾಜ್ಯದ ಸ್ವಾಭಿಮಾನ, ಆತ್ಮವಿಶ್ವಾಸ, ಹೆಮ್ಮೆ ಕಂಡಿತು. ನನ್ನ ದೇಶದ ಯುವಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾನೆ, ನನ್ನ ತಂದೆಯ ಕನಸು ನನಸಾಗಿದೆ ಎಂದು ನನಗೆ ಸಂತೋಷವಾಯಿತು.

ಇದು ರಾಜಕಾರಣಕ್ಕಾಗಿ ಆಡುತ್ತಿರುವ ಮಾತುಗಳಲ್ಲ.ಇದು ನಮ್ಮ ಭಾವನೆಗಳು.ಕರ್ನಾಟಕದ ಸ್ವಾಭಿಮಾನ, ಹೆಮ್ಮೆ, ಪರಂಪರೆಯನ್ನು ಪರಿಚಯಿಸುವ ಸಂದರ್ಭ. ಇದು ಕೇವಲ ನನ್ನಲ್ಲಿ ಮಾತ್ರವಲ್ಲ ಪ್ರತಿ ಕಾಂಗ್ರೆಸ್ ನಾಯಕರಲ್ಲೂ ಇದೆ. ಈ ಎಲ್ಲಾ ನಾಯಕರು ನಿಮಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ನಿಮ್ಮ ಈಗಿನ ಪರಿಸ್ಥಿತಿ ಕಂಡು ನಮಗೆ ಬಹಳ ನೋವಾಗುತ್ತದೆ. ನೀವು ಈ ಪರಿಸ್ಥಿತಿ ಸುಧಾರಿಸಲು ಬಯಸುತ್ತೇವೆ. ಸರ್ಕಾರಗಳು ಇರುವುದು ನಿಮ್ಮನ್ನು ಲೂಟಿ ಮಾಡಲು ಅಲ್ಲ, ನಿಮ್ಮ ಹಣವನ್ನು ನಿಮಗೆ ನೀಡಲು. ಇದಕ್ಕಾಗಿ ಉತ್ತಮ ಸ್ರ್ಕಾರ ನೀಡಬೇಕಿದೆ. ನಿಮ್ಮ ಹಕ್ಕನ್ನು ನಿಮಗೆ ನೀಡಿ, ಬೆಲೆ ಏರಿಕೆ ತಡೆಯಲು, ಯುವಕರಿಗೆ ಉದ್ಯೋಗ ನೀಡಲು, ಮೂಲಭೂತ ಸೌಕರ್ಯ ವೃದ್ಧಿ ಮಾಡಿ ಕರ್ನಾಟಕ ಮುನ್ನಡೆಸಿ ದೇಶದ ಹೆಮ್ಮೆಯ ರಾಜ್ಯ ಮಾಡಲು ಉತ್ತಮ ಸರ್ಕಾರ ಬೇಕು. ಈ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ವಿಶ್ವಾಸವಿದೆ.

ಸಮಾಜದಲ್ಲಿ ನಾವೆಲ್ಲರೂ ಸೋದರತ್ವದಿಂದ ಬದುಕಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಬೆಳೆಯಬೇಕು. ಇಲ್ಲದಿದ್ದರೆ ಇಡೀ ದೇಶಕ್ಕೆ ನಷ್ಟವಾಗಲಿದೆ. ನಿಮ್ಮ ಅನುಭವ, ವಿವೇಕದ ಮೇಲೆ ನಮಗೆ ನಂಬಿಕೆ ಇದೆ. ನಿಮಗೆ ಸತ್ಯ ತಿಳಿದುಕೊಳ್ಳುವ ಶಕ್ತಿ ಇದೆ. ಅದನ್ನು ಬಳಸಿಕೊಂಡು ದೇಶ ನಿರ್ಮಾಣ ಮಾಡಬೇಕಿದೆ. ಇಷ್ಟೋಂದು ಮಳೆ ಬೀಳುತ್ತಿದ್ದರೂ ನೀವು ನನ್ನ ಮಾತು ಕೇಳಲು ಇಷ್ಟು ಹೊತ್ತು ಕಾದು ಕುಳಿದಿರುವುದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News